ಮುಳ್ಳೇರಿಯ : ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಪಠ್ಯಪೂರಕವಾದ ಹೊಸ ಹುರುಪು ಮೂಡಿಸಲು ಮತ್ತು ಭಾಷಾಭಿಮಾನವನ್ನು ಬೆಳೆಸಲು, ಜಿವಿಎಚ್ಎಸ್ಎಸ್ ಕಾರಡ್ಕ ಶಾಲೆಯಲ್ಲಿ 'ಗಮಕ ಶ್ರಾವಣ' ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದಲೇ ನಿರ್ವಹಿಸಲ್ಪಟ್ಟಿತು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮತ್ತು ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಹಯೋಗದೊಂದಿಗೆ ಈ ಸಾಂಸ್ಕೃತಿಕ ಹಬ್ಬ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕ ಸಂದೀಪ ಬಿ ಎಸ್ ಅವರು, ಗಮಕ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ಯಲು ಮತ್ತು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮವನ್ನು ಜಾಗೃತಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಆದಿಗಮಕಿಗಳೆನಿಸಿರುವ ಕುಶಲವರು ಜನಿಸಿದ ಶ್ರಾವಣ ಮಾಸವನ್ನು 'ಗಮಕ ಶ್ರಾವಣ' ಎಂದು ಆಚರಿಸುವ ಸಂಪ್ರದಾಯದ ಬಗ್ಗೆ ಅವರು ಮಾಹಿತಿ ನೀಡಿದರು.
ಗಮಕ ಪರಿಷತ್ತಿನ ಕಾರ್ಯದರ್ಶಿ ವಿ.ಬಿ. ಕುಳಮರ್ವ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಈ ಬಾರಿ ಎಡನೀರು ಮಠದಲ್ಲಿ ಉದ್ಘಾಟನೆಗೊಂಡ ಈ ಸರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ವಾಚನ ಮತ್ತು ವ್ಯಾಖ್ಯಾನವನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು. ನಿವೃತ್ತ ಶಿಕ್ಷಕ ಕೃಷ್ಟೋಜಿ ರಾವ್ ಅವರು ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನೀಡಿ, ಭವಿಷ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಶುಭ ಹಾರೈಸಿದರು. ಗಮಕ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಜ್ಯೋತಿ ಪಾಣೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕುರಿತು ಶಿಕ್ಷಕರಾದ ಡಾ| ಶ್ರೀಶ ಪಂಜಿತ್ತಡ್ಕ, ರತೀಶ ಡಿ, ನಯನ ಕುಮಾರಿ, ರಾಮಚಂದ್ರ ಮತ್ತು ವಿದ್ಯಾರ್ಥಿನಿ ವರ್ಷ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 'ಸೀತಾ ಪರಿತ್ಯಾಗ' ಎಂಬ ಕಾವ್ಯ ಭಾಗವನ್ನು ದೇವಿಕಾ ಕೆ.ಆರ್. ಅವರು ಭಾವಪೂರ್ಣವಾಗಿ ವಾಚಿಸಿದರು ಮತ್ತು ಕೀರ್ತೇಶ್ ಅವರು ಅತ್ಯಂತ ಪರಿಣಾಮಕಾರಿಯಾಗಿ ವ್ಯಾಖ್ಯಾನಿಸಿದರು.
ಈ 'ಗಮಕ ಶ್ರಾವಣ' ಕಾರ್ಯಕ್ರಮವು ಕಾರಡ್ಕ ಶಾಲೆಯ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ, ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಯಿತು. ಅನಘ ಸರಸ್ವತಿ ಪ್ರಾರ್ಥನೆ ಹಾಡಿದರು. ವೈಷ್ಣವಿ ವಿ ಸ್ವಾಗತಿಸಿ, ಯುಕ್ತಿ ವಂದಿಸಿದರು. ಗ್ರೀಷ್ಮ ಕೆ.ಯಸ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


0 Comments