ಮಂಗಳೂರು : ಗೋಮಾತೆಯ ರಕ್ಷಣೆ ಹಾಗೂ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಂಗಳೂರು-ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಕದ್ರಿಯ ಶ್ರೀ ಯೋಗೇಶ್ವರ ಮಠದಲ್ಲಿ ಪೂಜ್ಯ ಸಂತರ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಸಂತರು ಗೋ ಗ್ರಾಸವನ್ನು ಗೋವು ಮತ್ತು ಕರುವಿಗೆ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಧಾಮದ ಪರಮಪೂಜ್ಯ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇಶದ ಅಸ್ತಿತ್ವ ಹಾಗೂ ಕೃಷಿ ವ್ಯವಸ್ಥೆಯ ಉಳಿವಿಗೆ ಗೋ ಸಂರಕ್ಷಣೆ ಅತ್ಯಗತ್ಯ ಎಂದು ಹೇಳಿದರು. ಸಾವಯವ ಕೃಷಿ ಮತ್ತು ಗೋ ಆಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದರು. ಗೋವು ನಮ್ಮ ಕೃಷಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಅದರ ಸಂಪನ್ಮೂಲಗಳು ಮಣ್ಣಿನ ಫಲವತ್ತತೆ ಹಾಗೂ ಕೃಷಿಯ ಸಮೃದ್ಧಿಗೆ ಸಹಕಾರಿಯಾಗಿವೆ. ಆಧುನಿಕ ಜೀವನಶೈಲಿಯ ನಡುವೆ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಮರೆಯಬಾರದು. ಗೋಮಾತೆಯ ವಾತ್ಸಲ್ಯ ಹಾಗೂ ಮಹತ್ವವನ್ನು ಪ್ರತಿಯೊಬ್ಬರೂ ಅರಿತು, ಗೋ ಸಂರಕ್ಷಣೆಯನ್ನು ಇಡೀ ಸಮಾಜದ ಕರ್ತವ್ಯವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, "ಗೋವಿನ ರಕ್ಷಣೆ ಕೇವಲ ಧಾರ್ಮಿಕ ವಿಚಾರವಲ್ಲ; ದೇಶದ ಕೃಷಿ, ಪರಿಸರ ಹಾಗೂ ಸ್ವದೇಶಿ ಗೋ ತಳಿಗಳ ಸಂರಕ್ಷಣೆಯೊಂದಿಗೂ ಸಂಬಂಧಿಸಿದೆ ಎಂದರು. ‘ಗೋ ಸಮ್ಮಾನ್ ಅಭಿಯಾನ’ದ ಸಹಿ ಸಂಗ್ರಹಕ್ಕೆ ಸೂಕ್ತ ಮನ್ನಣೆ ದೊರೆಯುವವರೆಗೆ ಹೋರಾಟ ಮುಂದುವರಿಸಬೇಕು. ಹಳ್ಳಿ–ಹಳ್ಳಿ, ತಾಲೂಕು-ತಾಲೂಕು ಸಂಚರಿಸಿ ಜನಜಾಗೃತಿ ಮೂಡಿಸಬೇಕು" ಎಂದು ಕರೆ ನೀಡಿದರು. ದೇಶೀಯ ಗೋ ತಳಿಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡುವ ಅಗತ್ಯವಿದ್ದು, ಗೋವಿನ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಪ್ರತಿಯೊಬ್ಬರೂ ಏಕಕಂಠದಿಂದ ಈ ಅಭಿಯಾನಕ್ಕೆ ಕೈಜೋಡಿಸಬೇಕು. ಗೋವಿಗೆ ಸಮ್ಮಾನ ದೊರೆತರೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಾರತೀಯ ಮೌಲ್ಯಗಳಿಗೆ ಸಮ್ಮಾನ ದೊರೆತಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕದ್ರಿ ಶ್ರೀ ಯೋಗೇಶ್ವರ ಮಠದ ಶ್ರೀ ಶ್ರೀ ನಿರ್ಮಲನಾಥ್ ಜೀ ಮಹಾರಾಜ್, ಗೋ ಧಾಮ್ ಪಥ್ಮೇಡ ರಾಜಸ್ಥಾನದ ಶ್ರೀ ಶ್ರೀ ರವೀಂದ್ರಾನಂದ ಸರಸ್ವತಿ ಜೀ ಮಹಾರಾಜ್, ಶ್ರೀ ಸಾಯಿ ಈಶ್ವರ್ ಗುರೂಜಿ, ಶ್ರೀ ಶ್ರೀ ಶ್ರೀ ಗೋಪಾಲನಂದ ಸರಸ್ವತಿ ಜೀ ಮಹಾರಾಜ್, ಶ್ರೀ ಶ್ರೀ ಕಾಳಿಕಾ ತನಯ ಉಮಾಮಹೇಶ್ವರ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಗೋಸೇವಾ ಗತೀವಿಧಿ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ, ರಾಜ್ಯ ತಂಡ ಸಂಯೋಜಕ ಜೀವನ್ ದೊಡ್ಠಬಳ್ಳಾಪುರ, ಸಂಭಾಗ ಪ್ರಭಾರಿ ಗಜೇಂದ್ರ, ಗೋ ಸಮ್ಮಾನ್ ಸಮಿತಿ ಜಿಲ್ಲಾ ಪ್ರಭಾರಿ ಅಶೋಕ ಇಳಂತಿಲ, ಗೋಪರಿವಾರ ಪ್ರಮುಖ್ ಉದಯಶಂಕರ್ ಭಟ್ ಸೇರಿದಂತೆ, ಗಂಗಾಧರ್ ಪೆರ್ಮಂಕಿ, ಶೖಲಜಾ ಭಟ್, ರಮೇಶ್ ಭಟ್, ಶಶಿಶೇಖರ್, ಹೇರಂಭ ಶಾಸ್ತ್ರಿ, ಉದಯ ಭಟ್ ರವರು ಉಪಸ್ಥಿತರಿದ್ದರು.


0 Comments