ಬದಿಯಡ್ಕ: ಕನ್ಯಾಪಾಡಿಯಲ್ಲಿ ಇಂದು ಮುಂಜಾನೆ 1.45ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕನ್ಯಪ್ಪಾಡಿಯ ಆಶ್ರಯ ಆಶ್ರಮ ಭಾಗದ ತಿರುವಿನಲ್ಲಿ ಅಮಿತ ವೇಗದಲ್ಲಿ ಸಂಚರಿಸುತ್ತಿದ್ದ ಎರಡು ಸ್ವಿಫ್ಟ್ ಕಾರುಗಳು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿವೆ.
ಅಪಘಾತದಲ್ಲಿ ಲಾರಿಯಲ್ಲಿದ್ದ ಜಬ್ಬಾರ್ ಹಾಗೂ ಕಾರುಗಳಲ್ಲಿದ್ದ ಅಫ್ಸಲ್ ಮತ್ತು ಅಜ್ನಾಲ್ ಗಾಯಗೊಂಡಿದ್ದು, ಅವರನ್ನು ಕಾಸರಗೋಡು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಗೆ ಎರಡು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲಾರಿಗೂ ಭಾರೀ ಹಾನಿಯಾಗಿದೆ. ಡಿಕ್ಕಿಯ ಬಳಿಕ ಕಾರೊಂದು ಲಾರಿಗೆ ಸಿಲುಕಿಕೊಂಡಿದ್ದರಿಂದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ವಿಂಚ್ ಉಪಕರಣದ ನೆರವಿನಿಂದ ವಾಹನವನ್ನು ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದಲ್ಲಿ ಕೆಎ 21 ಸಿ 0338 ಸಂಖ್ಯೆಯ ಲಾರಿಗೆ ಕೆಎಲ್ 14 ಎಇ 0915 ಸಂಖ್ಯೆಯ ಬಿಳಿ ಬಣ್ಣದ ಸ್ವಿಫ್ಟ್ ಕಾರು ಹಾಗೂ ಕೆಎಲ್ 14 ಎಜೆ 0035 ಸಂಖ್ಯೆಯ ಕಪ್ಪು ಬಣ್ಣದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿವೆ.
ಡಿಕ್ಕಿಯ ಪರಿಣಾಮ ಲಾರಿಯ ಡೀಸೆಲ್ ಟ್ಯಾಂಕ್ ಹಾಗೂ ಆಯಿಲ್ ಟ್ಯಾಂಕ್ ಒಡೆದು ರಸ್ತೆಯಲ್ಲಿ ಡೀಸೆಲ್ ಮತ್ತು ಆಯಿಲ್ ಹರಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆಯಲ್ಲಿದ್ದ ಜಾರುವಿಕೆ ನಿವಾರಿಸಿ ಸಂಚಾರ ಸುಗಮಗೊಳಿಸಿದರು.
ಸೀನಿಯರ್ ಫೈರ್ ಆ್ಯಂಡ್ ರೆಸ್ಕ್ಯೂ ಅಧಿಕಾರಿ ಸುಕು ವರ್ಗೀಸ್ ಅವರ ನೇತೃತ್ವದಲ್ಲಿ ಫೈರ್ ಆ್ಯಂಡ್ ರೆಸ್ಕ್ಯೂ ಅಧಿಕಾರಿಗಳಾದ ಕೆ. ವಿಜಿತಿನ್ ಕೃಷ್ಣನ್, ಅತುಲ್ ರವಿ, ಸಿ.ಕೆ. ಅಭಿನಂದ್, ಎನ್.ಪಿ. ರಾಕೇಶ್ ಹಾಗೂ ಒ.ಕೆ. ಪ್ರಜಿತ್ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.


0 Comments