ಮುಳ್ಳೇರಿಯ: ಮುಳಿಯಾರ್ ಪಂಚಾಯತ್ ವ್ಯಾಪ್ತಿಯ ಬೋವಿಕ್ಕಾನ ಪೇಟೆಯಲ್ಲಿ ಇಂದು ಬೆಳಗ್ಗೆ ಸುಮಾರು 6.30ಕ್ಕೆ ಜಿಪ್ಸಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಜಿಪ್ಸಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಅಪಘಾತದಲ್ಲಿ ವಾಹನದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಸುಮಾರು ಅರ್ಧ ಗಂಟೆ ಕಾಲ ಬೋವಿಕ್ಕಾನಂ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಮಾಹಿತಿ ಲಭಿಸಿದ ತಕ್ಷಣ ಕಾಸರಗೋಡಿನಿಂದ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ಸುಕು ವರ್ಗೀಸ್ ಅವರ ನೇತೃತ್ವದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತು.ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ವೇಳೆಗೆ ಬೈಕ್ ಸಂಪೂರ್ಣವಾಗಿ ಜಖಂಗೊಂಡ ಸ್ಥಿತಿಯಲ್ಲಿದ್ದು, ಜಿಪ್ಸಿ ತಲೆಕೆಳಗಾಗಿ ಪಲ್ಟಿಯಾಗಿತ್ತು. ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.ಅಪಘಾತಕ್ಕೀಡಾದ ವಾಹನಗಳನ್ನು ಅಗ್ನಿಶಾಮಕ ವಾಹನದ ವಿಂಚ್ ಬಳಸಿ ಸುರಕ್ಷಿತವಾಗಿ ರಸ್ತೆಯಿಂದ ತೆರವುಗೊಳಿಸಲಾಯಿತು. ವಾಹನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ರಸ್ತೆ ಮೇಲೆ ಮರದ ಪುಡಿ ಹಾಕಿ, ಜಾರುವಿಕೆ ಹಾಗೂ ಮತ್ತಷ್ಟು ಅಪಘಾತ ಸಂಭವಿಸುವ ಸಾಧ್ಯತೆಯನ್ನು ತಪ್ಪಿಸಿ ಸಂಚಾರ ಪುನಃಸ್ಥಾಪಿಸಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗಳಾದ ಅಮಲ್ ರಾಜ್ ಟಿ., ಜಿತಿನ್ ಕೃಷ್ಣನ್ ಕೆ.ವಿ., ವೈಶಾಖ್ ಎಂ.ಎ., ಅರುಣ್ ಕುಮಾರ್ ಎಂ.ಎಂ., ಪ್ರಜಿತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.ಗಾಯಾಳುಗಳನ್ನು ಸಮೀಪದ ಸಿ.ಎಂ. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅವರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸಿಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

0 Comments