ಕುಂಬಳೆ: ವಿದ್ಯಾರ್ಜನೆಗೈಯ್ಯುವವರಿಗೆ ನೀಡುವ ಬೆಂಬಲ ಜೀವನ ಕೃತಾರ್ಥತೆಗೆ ಕಾರಣವಾಗಿ ಬಹುದೊಡ್ಡ ಮೈಲುಗಲ್ಲಾಗುತ್ತದೆ. ಜ್ಞಾನಾಜ್ನೆಗೆ ಇಂದು ಸಾಕಷ್ಟು ಅವಕಾಶಗಳಿದ್ದು ಸ್ವಸ್ಥ-ಸುದೃಢ ಸಮಾಜ ನಿರ್ಮಾಣದ ದೃಷ್ಟಿಯಿಂದ ವಿದ್ಯಾವಂತ ಸಮಾಜಕ್ಕೆ ಆಸರೆಯಾಗುವುದು ಹೆಮ್ಮೆಯ ಕ್ಷಣಗಳು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ, ಮುಂಡಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದ ಆಡಳಿತ ಸಮಿತಿ ಕಾರ್ಯದರ್ಶಿ ಮಂಜುನಾಥ ಆಳ್ವ ಮಡ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ಸೀತಾಂಗೋಳಿಯ ಸಂತೋಷ್ ಆರ್ಟ್ಸ್-ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಕ್ಲಬ್ ಆವರಣದಲ್ಲಿ ಶನಿವಾರ ನಡೆದ ಪತ್ರಕರ್ತರ ಮಕ್ಕಳಿಗಿರುವ ಕಲಿಕೋಪಕರಣ ಚೆಕ್ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲಾ ಆಗುಹೋಗುಗಳಿಗೆ ಕಣ್ಣಾಗಿರುವ ಪತ್ರಕರ್ತರು ಇಂದು ಸಾವಿರ ಸವಾಲುಗಳನ್ನು ಎದುರಿಸುತ್ತಿರುವುದು ನಿಜ. ಈ ನಿಟ್ಟಿನಲ್ಲಿ ಸಂಘಟನೆಯ ಮೂಲಕ ಪರಸ್ಪರ ಕೈಜೋಡಿಸಿ ಮುಂದುವರಿಯುತ್ತಿರುವುದು ಸ್ತುತ್ಯರ್ಹ ಎಂದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ವಿವಿಧ ಆಯಾಮಗಳಿಂದ ಬೃಹತ್ ಮೊತ್ತವೊಂದನ್ನು ಸಂಗ್ರಹಿಸಿ ಒಂದು ಕೋಟಿಯ ಲಕ್ಷö್ಯದೊಂದಿಗೆ ಸಂಘಟನೆ ಬೆಳೆಯುತ್ತಿದ್ದು, ಪತ್ರಕರ್ತರ ಆಶೋತ್ತರಗಳಿಗೆ ಬೆನ್ನೆಲುಬಾಗಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂತೋಷ್ ಆರ್ಟ್ಸ್-ಸ್ಪೋರ್ಟ್ಸ್ ಕ್ಲಬ್ ನ ನ್ಯಾಯವಾದಿ. ಥಾಮಸ್ ಡಿ.ಸೋಜ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಕ್ಲಬ್ ಅಧ್ಯಕ್ಷ ಮಹಾಲಿಂಗ ಸೀತಾಂಗೋಳಿ, ಯುವ ಸಂಘಟಕ ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಎಡನಾಡು-ಕಣ್ಣೂರು ಸೇ.ಸ.ಬ್ಯಾಂಕಿನ ಅಧ್ಯಕ್ಷ ಜಯಂತ ಪಾಟಾಳಿ ಸೀತಾಂಗೋಳಿ, ಉದ್ಯಮಿ ಇಬ್ರಾಹಿಂ ಮುಂಡಿತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪ್ರಮುಖರಾದ ರಾಮಪ್ಪ ಮಂಜೇಶ್ವರ, ಮಾನ ಮಾಸ್ತರ್, ಶೋಭಿತ್, ಅಪ್ಪಣ್ಣ ಸೀತಾಂಗೋಳಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಮತಾ ಸಾಹಿತ್ಯ ವೇದಿಕೆಯ ಸುಂದರ ಬಾರಡ್ಕ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ. ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವಂದಿಸಿದರು.
.jpg)
0 Comments