ದಶಮಾನೋತ್ಸವ ಸಡಗರದಲ್ಲಿ
ಯಕ್ಷಗಾನ ಅಭ್ಯಾಸ ಕೇಂದ್ರ ಯು (YAKU) ವರ್ಷಂಪ್ರತಿ, ದುಬಾಯಿ ಅಥವ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿರುವ ದುಬಾಯಿ ಯಕ್ಷೋತ್ಸವ 2025 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ, ಅಸಾಧಾರಣ ಕಲಾಗುಣ ಸೌಂದರ್ಯ ಮಾಧುರ್ಯಗಳಿಂದ ಜನ ಸಾಮಾನ್ಯರೂ ಅರ್ಥವಿಸಿಕೊಳ್ಳುವ ಮಾಧ್ಯಮವಾದ ಯಕ್ಷಗಾನವನ್ನು ಒಪ್ಪಿ ಅಪ್ಪಿಕೊಂಡು ನಿರಂತರ 42 ವರ್ಷಗಳ ಕಾಲ ಯಕ್ಷಗಾನದ ಸೇವೆಯನ್ನು ಮಾಡುತ್ತ ಬಂದಿರುವ ಕೆ.ಎನ್.ಸುಬ್ರಾಯ ಹೊಳ್ಳ ಕಾಸರಗೋಡುರವರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇವರ ವಾರ್ಷಿಕ ಪ್ರಶಸ್ತಿ "ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ-2025"ಯನ್ನು ನೀಡಿ ಗೌರವಿಸಲಾಗುವುದು.
ಯಕ್ಷ ಕೀರಿಟಕ್ಕೆ ಬೆಳ್ಳಿಯ ಹೊಳಪು ಮೂಡಿಸಿದ ಹೊಳ್ಳರು
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಹುಟ್ಟಿದ ಜಿಲ್ಲೆಯಲ್ಲಿ ಕೆ.ಎಸ್ ನಾರಾಯಣ ಹೊಳ್ಳ ಮತ್ತು ಪದ್ಮಾವತಿ ಅಮ್ಮನವರ ಮಗನಾಗಿ 17-12-1965 ರಲ್ಲಿ, ಭುವಿಯ ಬೆಳಕನು ಕಂಡವರು, ಕೆ.ಎನ್ ಸುಬ್ರಾಯ ಹೊಳ್ಳರು. ಕಾಸರಗೋಡಿನಲ್ಲೇ 8ನೇ ತರಗತಿ ತನಕ ವ್ಯಾಸಂಗ ಮಾಡಿದ ಶ್ರೀಯುತರಿಗೆ, ಮುಂದೆ ಯಕ್ಷಗಾನವೇ ಬದುಕಿಗೆ ಬೆಳಕಾಯಿತು. ಗುರುಗಳಾದ ಕೂಡ್ಲು ಆನಂದರು ಹಾಗೂ ಕೂಡ್ಲು ನಾರಯಣ ಬಲ್ಯಾಯರ ಶಿಷ್ಯತ್ವವನ್ನು ಸ್ವೀಕರಿಸಿ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಶ್ರೀಯುತರು, ಬಳಿಕ 1984 ನೇ ಇಸವಿಯಲ್ಲಿ ಕಟೀಲು ಮೇಳಕ್ಕೆ ಪಾದಾರ್ಪಣೆ ಮಾಡಿದರು.
ನಂತರ ಪುತ್ತೂರು,ಕದ್ರಿ,ಕರ್ನಾಟಕ, ಮಧೂರು ಬಪ್ಪನಾಡು ಮರಳಿ ಕಟೀಲು, ಹೊಸನಗರ , ಎಡನೀರು, ಹನುಮಗಿರಿ, ಧರ್ಮಸ್ಥಳ ಇಂತಹ ತೆಂಕುತಿಟ್ಟಿನ ಮೇಳಗಳಲ್ಲಿ ತಿರುಗಾಟ ಮಾಡಿದ ಹೊಳ್ಳರು ಸದ್ಯಕ್ಕೆ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತಿದ್ದಾರೆ. ಪ್ರಧಾನ ಕಿರೀಟ ವೇಷಗಳ ಜೊತೆ ನಾಟಕೀಯವೇಷಗಳಲ್ಲಿ ಹೆಚ್ಚಿನ ಸಿದ್ಧಿ. ಅಗತ್ಯಕ್ಕೆ ಸ್ತ್ರೀವೇಷ -ಬಣ್ಣದ ವೇಷಗಳನ್ನೂ ಮಾಡಿದವರು. ಶ್ರೀಮತಿ ಶಾರದರನ್ನು ವರಿಸಿದ ಹೊಳ್ಳರು ಹರಿನಾರಾಯಣ ಮತ್ತು ಪದ್ಮಶ್ರೀ ಎಂಬ ಇಬ್ಬರು ಮಕ್ಕಳೊಂದಿಗೆ ಬಂಟ್ವಾಳ ಗ್ರಾಮದಲ್ಲಿ ಸಂತೃಪ್ತ ಜೀವನ ಸಾಗಿಸುತಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಶ್ರೀಯುತ ಸುಬ್ರಾಯ ಹೊಳ್ಳರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ ಮತ್ತು ಸಮಸ್ತ ಯು ಎ ಇ ಯ ಯಕ್ಷಗಾನ ಅಭಿಮಾನಿಗಳ ಪರವಾಗಿ ಶುಭಾಶಯಗಳು.
🖋️ ಬರಹ :ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
0 Comments