ಬಾಯಾರು : ಕುರುಡಪದವು ಎಯುಪಿ ಶಾಲಾ ಪ್ರವೇಶೋತ್ಸವು ಸಂಭ್ರಮ-ಸಡಗರದಿಂದ ಜರಗಿತು. ಶಾಲಾ ಮೈದಾನದಿಂದ ಶಾಲಾ ವ್ಯವಸ್ಥಾಪಕ ಸದಸ್ಯರು, ಶಾಲಾ ಸಿಬ್ಬಂದಿಗಳು, ಮಂಜೇಶ್ವರ ಜನ ಮೈತ್ರಿ ಪೋಲಿಸರು, ಅತಿಥಿಗಳು ಸೇರಿ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳನ್ನು ಶಾಲಾ ಸಭಾಂಗಣಕ್ಕೆ ಕರೆತಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮನ ಜಿ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲು ಮಕ್ಕಳು ಸದಾ ಪ್ರಯತ್ನಿಸಬೇಕೆಂದರು.
ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯ, ನಿವೃತ್ತ ಮುಖ್ಯೋಪಾಧ್ಯಾಯ ಶಂಕರ ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೊಸದಾಗಿ ಸೇರಿದ ಪುಟಾಣಿ ಮಕ್ಕಳು ಅಕ್ಷರ ದೀಪ ಬೆಳಗಿಸುವ ಮೂಲಕ ಜ್ಞಾನಾರ್ಜನೆಗೆ ಮೊದಲ ಹೆಜ್ಜೆಯಿರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಪ್ರವೇಶೋತ್ಸವ ಗೀತೆ ಮತ್ತು ವಿದ್ಯಾಭ್ಯಾಸ ಮಂತ್ರಿಗಳಾದ ಎಂ.ಶಂಸುದ್ದೀನ್ ರವರ ಸಂದೇಶವನ್ನು ಎಲ್ಲರಿಗೂ ತಲುಪುವಂತೆ ಬಿತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ನವಾಗತ ಮಕ್ಕಳಿಗೆ ಪುಸ್ತಕ, ಬರವಣಿಗೆ ಸಾಮಾಗ್ರಿಗಳನ್ನು ಒಳಗೊಂಡ ಬ್ಯಾಗ್ ವಿತರಿಸಲಾಯಿತು. ನಂತರ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಬಷೀರ್ ಸಾಪ್ಕೋರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮತ್ತು ಶಾಲೆಗೆ ಅಗತ್ಯವಾದ ಧ್ವನಿವರ್ಧಕವನ್ನು ಉದಾರವಾಗಿ ನೀಡಿದರು. ಶಾಲಾ ಶಿಕ್ಷಕಿ ಹರ್ಷಿತಾ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಪ್ರತಿಜ್ಞೆಯನ್ನು ಬೋಧಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಷೀರ್ ಸಾಪ್ಕೋರವರು ಕಳೆದ ಶೈಕ್ಷಣಿಕ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ವತಿಯಿಂದ ಪದಕವನ್ನು ನೀಡಿ ಮಕ್ಕಳ ಮತ್ತಷ್ಟು ಸಾಧನೆಗೆ ಪ್ರೇರಣೆಯಿತ್ತರು. ಶಿಕ್ಷಕಿ ಅರ್ಚನಾ ಟೀಚರ್ ಪ್ರಾರ್ಥನೆ ಹಾಡಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಗಿರೀಶ್ ಸ್ವಾಗತಿಸಿ. ಪ್ರಶಾಂತ್ ಕುಮಾರ್ ಅಮ್ಮೇರಿ ವಂದಿಸಿದರು.

0 Comments