ಕುಂಬಳೆ : ಸ್ವಚ್ಛತೆಯ ಕುರಿತಾದ ಆದೇಶಗಳು, ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ಊರೆಲ್ಲಾ ತ್ಯಾಜ್ಯರಾಶಿ ತುಂಬಿ ರೋಗಭೀತಿ ಹರಡುತ್ತಿರುವ ಸಂದರ್ಭದಲ್ಲಿ ತ್ಯಾಜ್ಯ ಎಸೆದವರಿಂದಲೇ ಹೆಕ್ಕಿಸಿದ ಮಾದರಿ ಕಾರ್ಯವನ್ನು ಪುತ್ತಿಗೆ ಗ್ರಾ.ಪಂ ಹನ್ನೊಂದನೇ ವಾರ್ಡು ಸದಸ್ಯ ಸತೀಶ ಪೆರ್ಣೆ ಮಾಡುವ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮಾಜಘಾತುಕರು ತ್ಯಾಜ್ಯ ಎಸೆದಿರುವ ಕುರಿತಾಗಿ ಊರವರಿಂದ ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ವಾರ್ಡು ಸದಸ್ಯ ಸತೀಶ್ ಪೆರ್ಣೆ ಪುತ್ತಿಗೆ ಗ್ರಾ.ಪಂ ಹರಿತ ಕರ್ಮಸೇನಾ ಕಾರ್ಯಕರ್ತರ ಜತೆಗೂಡಿ ಸ್ಥಳಕ್ಕೆ ತೆರಳಿ ಕಟ್ಟಿ ಎಸೆದ ತ್ಯಾಜ್ಯ ರಾಶಿಯ ಕಟ್ಟ ಬಿಚ್ಚಿದಾಗ ಕಾಸರಗೋಡಿನಲ್ಲಿ ಕಾರ್ಯಾಚರಿಸುತ್ತಿರುವ ಆಹಾರ ಸಂಸ್ಥೆಯ ವಿಳಾಸ ಲಭಿಸಿದ್ದು, ತಕ್ಷಣವೇ ಅದರಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆಮಾಡಿ ತ್ಯಾಜ್ಯ ಎಸೆದವರ ಮಾಹಿತಿ ಕೋರಿದ್ದು, ತಕ್ಷಣವೇ ತ್ಯಾಜ್ಯ ಎಸೆದ ವಾಹನ ಮಾಲಕ ಸ್ಥಳಕ್ಕಾಗಮಿಸಿದ್ದು, ತ್ಯಾಜ್ಯ ಎಸೆದಾತನಿಂದಲೇ ತ್ಯಾಜ್ಯ ತೆರವುಗೊಳಿಸುವ ಕಾರ್ಯ ಮಾಡಿರುವುದಲ್ಲದೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದ ಆರೋಪದಡಿ ವಾಹನ ಮಾಲಕನಿಗೆ ಆ ವೇಳೆ ಘಟನಾ ಸ್ಥಳದಲ್ಲಿ ಹಾಜರಿದ್ದ ಆರೋಗ್ಯಾಧಿಕಾರಿ ನಿಮಿಷ ಹತ್ತುಸಾವಿರ ದಂಡ ವಿಧಿಸಿದ್ದಾರೆ. ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇ.ಕೆ ಮುಹಮ್ಮದ್ ಕುಂಞ್ಞಿ, ಆರೋಗ್ಯಾಧಿಕಾರಿ ನಿಮಿಷ ಹಾಗೂ ಹರಿತ ಕರ್ಮಸೇನಾ ಕಾರ್ಯಕರ್ತರು ಆ ವೇಳೆ ಉಪಸ್ಥಿತರಿದ್ದರು. ವೃತ್ತಿಯಲ್ಲಿ ಚಾಲಕರಾಗಿರುವ ಸತೀಶ ಪೆರ್ಣೆ ಸತತ ಎರಡನೇ ಬಾರಿಗೆ ಈ ತೆರನಾದ ಸಾಧನೆ ಮೆರೆದಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.

0 Comments