ಕಾರಡ್ಕ : ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಚಿಗುರು’ ಹಸ್ತಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ರಚಿಸಿದ ಕವನ, ಕಥೆ, ಲೇಖನ, ಚಿತ್ರಗಳು ಸೇರಿದಂತೆ ವಿವಿಧ ಸೃಜನಾತ್ಮಕ ಬರಹಗಳನ್ನು ಒಳಗೊಂಡ ‘ಚಿಗುರು’ ಹಸ್ತಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಪತ್ರಿಕೆಯ ಸಂಪಾದನೆ ಮತ್ತು ವಿನ್ಯಾಸವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿನಿಯರಾದ ಹಿತೈಷಿ ಹಾಗೂ ಅನನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಉನ್ನತ ಶಿಕ್ಷಣದತ್ತ ಸಾಗುತ್ತಿರುವ ಅವರು ತಮ್ಮ ಶಾಲಾ ದಿನಗಳ ಅನುಭವ, ಕಾಲೇಜು ಜೀವನ ಹಾಗೂ ಬರವಣಿಗೆಯ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು.
ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಅವರು "ಮಕ್ಕಳಲ್ಲಿನ ಬರವಣಿಗೆ ಹಾಗೂ ಸೃಜನಶೀಲ ಕೌಶಲ್ಯಗಳನ್ನು ಪ್ರೋತ್ಸಾಹಿಸುವುದು ಈ ಹಸ್ತ ಪತ್ರಿಕೆಯ ಮುಖ್ಯ ಉದ್ದೇಶ. 'ಚಿಗುರು' ಎಂಬ ಹೆಸರಿನಂತೆ ಮಕ್ಕಳ ಪ್ರತಿಭೆ ಚಿಗುರೊಡೆಯಲಿ" ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಾ. ಶ್ರೀಶ ಪಂಜಿತ್ತಡ್ಕ, ರತೀಶ, ನಯನ ಕುಮಾರಿ, ಸರಣಿಯ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕೀರ್ತೇಶ್ ಸ್ವಾಗತಿಸಿ, ಯುಕ್ತಿ ವಂದಿಸಿದರು.
0 Comments