ಕೊಲ್ಲಂ : ಮೆದುಳು ನಿಷ್ಕ್ರಿಯಗೊಂಡ ಕೊಲ್ಲಂ ಮಹಾನಗರ ಪಾಲಿಕೆ ಸದಸ್ಯ ಬಿ. ಅಜಿತ್ ಕುಮಾರ್ ಅವರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು ಐವರಿಗೆ ಹೊಸ ಜೀವನ ನೀಡಲಾಗಿದೆ.
ಬಿ. ಅಜಿತ್ ಕುಮಾರ್ ಅವರು ಕೊಲ್ಲಂ ಕಾರ್ಪೊರೇಷನ್ನ 7ನೇ ವಾರ್ಡ್ ಸದಸ್ಯರಾಗಿದ್ದು, ಕ್ರೀಡೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಜುಲೈ 19ರಂದು ಪಾರ್ಶ್ವವಾಯು (ಸ್ಟ್ರೋಕ್) ಉಂಟಾದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಂ ಟ್ರಾವಂಕೂರ್ ಮೆಡಿಕಲ್ ಕಾಲೇಜು ಆಸ್ಪತ್ರೆ (ಮೆಡಿಸಿಟಿ)ಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಸುಮಾರು 1 ಗಂಟೆಗೆ ಮೆದುಳು ನಿಷ್ಕ್ರಿಯಗೊಂಡು ಮರಣವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದರು.
ಅಜಿತ್ ಕುಮಾರ್ ಅವರ ಸಹೋದರ ಸುರೇಶ್ ಕುಮಾರ್ ಹಾಗೂ ಸಹೋದರಿ ಅಜಿತಾ ಕುಮಾರಿ ಸೇರಿದಂತೆ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಸಮ್ಮತಿ ನೀಡಿದ್ದಾರೆ. ಅವಿವಾಹಿತರಾಗಿದ್ದ ಅಜಿತ್ ಕುಮಾರ್ ಅವರ ಅಂಗಾಂಗಗಳನ್ನು ಕೆ-ಸೋಟೊ ಮೇಲ್ವಿಚಾರಣೆಯಲ್ಲಿ ಅಗತ್ಯವಿರುವ ರೋಗಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಅವರ ಯಕೃತ್ತನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ, ಒಂದು ಮೂತ್ರಪಿಂಡವನ್ನು ತಿರುವನಂತಪುರ ವೈದ್ಯಕೀಯ ಕಾಲೇಜಿಗೆ, ಮತ್ತೊಂದು ಮೂತ್ರಪಿಂಡವನ್ನು ಕೊಲ್ಲಂ ಟ್ರಾವಂಕೂರ್ ಮೆಡಿಸಿಟಿ ಆಸ್ಪತ್ರೆಗೆ ಹಾಗೂ ಕಣ್ಣುಗಳನ್ನು ತಿರುವನಂತಪುರದ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆಗೆ ರವಾನಿಸಲಾಗುತ್ತಿದೆ.
ಅಂಗಾಂಗಗಳನ್ನು ಕೊಲ್ಲಂನಿಂದ ತಿರುವನಂತಪುರದ ಆಸ್ಪತ್ರೆಗಳಿಗೆ ತ್ವರಿತವಾಗಿ ಸಾಗಿಸಲು ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ಇಲಾಖೆ ವಿಶೇಷ 'ಗ್ರೀನ್ ಕಾರಿಡಾರ್' ವ್ಯವಸ್ಥೆ ಕಲ್ಪಿಸಲಾಗಿತ್ತು.

0 Comments