ಕಾಸರಗೋಡು : ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ನಲ್ಲಿ ನಡೆದ ದಕ್ಷಿಣ ಭಾರತದ ಯುವ ಬರಹಗಾರರ ಸಾಹಿತ್ಯೋತ್ಸವದಲ್ಲಿ ಕಾಸರಗೋಡಿನ ಕವಯತ್ರಿಯರು ಭಾಗವಹಿಸಿ ವಿವಿಧ ಭಾಷಾ ಕವನಗಳನ್ನು ವಾಚನ ಮಾಡುವ ಮೂಲಕ ಗಮನ ಸೆಳೆದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ತೆಲಂಗಾಣ ಸರ್ಕಾರದ ಭಾಷಾ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೈದರಾಬಾದ್ನ ರವೀಂದ್ರ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾದ ದಕ್ಷಿಣ ಭಾರತದ ಯುವ ಬರಹಗಾರರ ಸಾಹಿತ್ಯೋತ್ಸವವನ್ನು ತೆಲಂಗಾಣದ ಭಾಷಾ ಸಾಂಸ್ಕೃತಿಕ ನಿರ್ದೇಶಕ ಎಂಗು ನರಸಿಂಹ ರೆಡ್ಡಿ ಉದ್ಘಾಟಿಸಿದರು. ಸಾಹಿತ್ಯ ಅಕಾಡೆಮಿ ಸಂಚಾಲಕಿ ಮೃಣಾಲಿನಿ ಅಧ್ಯಕ್ಷತೆವಹಿಸಿದ್ದರು. ಬಳಿಕ ಬಹುಭಾಷಾ ಕಥಾಗೋಷ್ಠಿ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕವಿಗೋಷ್ಠಿಯಲ್ಲಿ ಕಾಸರಗೋಡಿನ ಕವಯತ್ರಿ ದಿವ್ಯಾ ಗಟ್ಟಿ ಅವರು ತುಳುನಾಡಿನ ಸಮಗ್ರ ಚಿತ್ರಣವನ್ನು ಬಿಂಬಿಸುವ ತುಳು ಕವಿತೆಯನ್ನು ವಾಚಿಸಿ, ಅದರ ಆಶಯ ಮತ್ತು ಸಂದೇಶವನ್ನು ಆಂಗ್ಲ ಭಾಷೆಯಲ್ಲಿಯೂ ವಿವರಿಸಿದರು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಉಪನ್ಯಾಸಕಿ ಲಕ್ಷ್ಮಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿದ್ದರು. ತೆಲುಗರ ನಾಡಿನಲ್ಲಿ ತುಳುನಾಡಿನ ತುಳು ಕವನ ಹಾಗೂ ಕರುನಾಡಿನ ಕನ್ನಡ ಕವನ ಭಾರೀ ಪ್ರಶಂಸೆಗೆ ಪಾತ್ರವಾಯಿತು.

0 Comments