ಕಾಸರಗೋಡು: ಪೆರಿಯಾ ವಡಕ್ಕೆಕ್ಕರ ನಿವಾಸಿ ನಡುಮಿಲ್ವೀಟಿಲ್ ಪುರುಷೋತ್ತಮನ್ (64) ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ನೀರು ಸೇದುವ ವೇಳೆ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿರುವ ತರವಾಡು ಮನೆಗೆ ನೀರು ತರಲು ಪುರುಷೋತ್ತಮನ್ ತೆರಳಿದ್ದರು. ಒಂದು ಬಕೆಟ್ ನೀರನ್ನು ಮನೆಗೆ ತಂದು ಮತ್ತೆ ಬಾವಿಯ ಬಳಿಗೆ ತೆರಳಿದ್ದರು. ಬಳಿಕ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಿದಾಗ, ಬಕೆಟ್ ಹಾಗೂ ಹಗ್ಗ ಬಾವಿಯೊಳಗೆ ಇಳಿಸಿರುವುದು ಕಂಡುಬಂದಿದೆ.
ಸಂಶಯಗೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿ ಮೃತದೇಹವನ್ನು ಬಾವಿಯಿಂದ ಹೊರತೆಗೆದು ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ.
ಪ್ಯಾರಲಲ್ ಕಾಲೇಜು ಶಿಕ್ಷಕರಾಗಿದ್ದ ಪುರುಷೋತ್ತಮನ್ ಸಕ್ರಿಯ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದು, ಉತ್ತಮ ಕೃಷಿಕ ಹಾಗೂ ಸಂಘಟಕರಾಗಿದ್ದರು. ಅವರ ಆಕಸ್ಮಿಕ ನಿಧನದಿಂದ ನಾಡಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

0 Comments