ಕಾಸರಗೋಡು : ವಂದೇ ಮಾತರಂ ಗೀತೆಗೆ ಸಂಬಂಧಿಸಿದ ನಿರ್ಬಂಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆರೋಪ ಮಾಡಿದೆ. ಕೇರಳವನ್ನು ಭಾರತದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದರು. ಕಾಸರಗೋಡು ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಆಯೋಜಿಸಿದ್ದ ‘ವಂದೇ ಮಾತರಂ ಸದಸ್ಸು’ ಉದ್ಘಾಟಿಸಿ ಅವರು ಮಾತನಾಡಿದರು.
1947ರ ಭಾರತ ವಿಭಜನೆಗೂ ಮುನ್ನ ವಂದೇ ಮಾತರಂ ಗೀತೆಯನ್ನು ವಿಭಜಿಸಿದ ರೀತಿಯಲ್ಲೇ ಈಗಿನ ಬೆಳವಣಿಗೆ ಕಾಣಿಸುತ್ತಿದೆ ಎಂದು ಕೃಷ್ಣದಾಸ್ ಹೇಳಿದರು. ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯ ಸರ್ಕಾರವೊಂದು ಉಲ್ಲಂಘಿಸುವುದು ಅಪರೂಪದ ಘಟನೆ ಎಂದ ಅವರು, ಬಂಗಾಳ ವಿಭಜನೆಯನ್ನು ವಿರೋಧಿಸಲು ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಾಗಿ ಹಾಡಿದ್ದ ವಂದೇ ಮಾತರಂ ಗೀತೆ ಇದೀಗ ಹೇಗೆ ನಿರ್ಬಂಧಿತವಾಯಿತು ಎಂಬುದನ್ನು ವಿ.ಡಿ. ಸತೀಶನ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಲೀಗ್ ಹಾಗೂ ಜಮಾಅತೆ ಇಸ್ಲಾಮಿಯ ಅಜೆಂಡಾಗಳಿಗೆ ಸರ್ಕಾರ ಮಣಿಯುತ್ತಿದೆ ಎಂದು ಆರೋಪಿಸಿದ ಕೃಷ್ಣದಾಸ್, ಈ ಬೆಳವಣಿಗೆಯನ್ನು ದೇಶಭಕ್ತರು ಆತಂಕದಿಂದ ನೋಡುತ್ತಿದ್ದಾರೆ ಎಂದರು. ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಇಂತಹ ಬೆಳವಣಿಗೆ ನಡೆದಿರುವುದು ನೋವಿನ ಸಂಗತಿ ಎಂದು ಹೇಳಿದರು.
ಅಭಿವೃದ್ಧಿ ವಿರೋಧಿ ನಿಲುವು ಮತ್ತು ವಿಭಜನಾ ರಾಜಕಾರಣವೇ ಎರಡೂ ಮೈತ್ರಿಕೂಟಗಳ ಪ್ರಮುಖ ಲಕ್ಷಣವಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮತ್ತೆ ಒಂದಾಗುತ್ತಿವೆ ಎಂದು ಹೇಳಿದರು. ಇದರ ವಿರುದ್ಧ ದೇಶಭಕ್ತರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ಕರ್ನಾಟಕ ಲೀಗಲ್ ಸೆಲ್ ಸದಸ್ಯೆ ಅಡ್ವ. ಸಹನಾ ಕುಂದರ್ ಮಾತನಾಡಿ, ವಂದೇ ಮಾತರಂ ಗೀತೆಯನ್ನು ಬದಿಗೊತ್ತುವ ಮೂಲಕ ಕಾಂಗ್ರೆಸ್ ಆಡಳಿತಗಳು ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತಿವೆ ಎಂದು ಆರೋಪಿಸಿದರು.
1896ರಲ್ಲಿ ಕೊಲ್ಕತ್ತಾದಲ್ಲಿ ನಡೆದ 12ನೇ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ಹಾಡಿದರು. ನಂತರ 1937ರವರೆಗೆ ವಿವಿಧ ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇ ಮಾತರಂ ಹಾಡಲಾಗುತ್ತಿತ್ತು. 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಿದರೆ ಸಾಕು ಎಂದು ತೆಗೆದುಕೊಂಡ ನಿರ್ಧಾರವು ಭಾರತ ವಿಭಜನೆಗೆ ದಾರಿ ಹುಡುಕಿದವರಿಗೆ ಪ್ರೋತ್ಸಾಹ ನೀಡಿದಂತಾಯಿತು ಎಂದು ಅವರು ಹೇಳಿದರು.
2026ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವೂ ಇದೇ ರೀತಿಯ ಪರಿಸ್ಥಿತಿಯನ್ನು ಮತ್ತೊಮ್ಮೆ ಸೃಷ್ಟಿಸಿದೆ ಎಂದು ಸಹನಾ ಕುಂದರ್ ಆರೋಪಿಸಿದರು. ಧಾರ್ಮಿಕ ಕಾರಣಗಳಿಂದ ವಂದೇ ಮಾತರಂ ಹಾಡಲು ಸಾಧ್ಯವಿಲ್ಲ ಎಂದು ಮುಸ್ಲಿಂ ಸಂಘಟನೆಗಳು ಹೇಳುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕಾಂಗ್ರೆಸ್ ವಂದೇ ಮಾತರಂಗೆ ನಿರ್ಬಂಧ ವಿಧಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಂಗಾಳ ವಿಭಜನೆಯನ್ನು ವಿರೋಧಿಸಲು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಹಾಡಿದ ವಂದೇ ಮಾತರಂಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಹಾಗೂ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಬಂಧ ವಿಧಿಸಿರುವುದು ಸ್ವೀಕಾರಾರ್ಹವಲ್ಲ. ಕಾಂಗ್ರೆಸ್ ಭಾರತವನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಯತ್ತ ಕೊಂಡೊಯ್ಯುತ್ತಿದೆ ಎಂದು ಸಹನಾ ಕುಂದರ್ ಆರೋಪಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸವಿತಾ ಟೀಚರ್, ರಾಮಪ್ಪ ಮಂಜೇಶ್ವರ, ಎ. ವೇಲಾಯುಧನ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್ ಮತ್ತು ಮನುಲಾಲ್ ಮೇಲತ್ ಮಾತನಾಡಿದರು.

0 Comments