ಶ್ರೀಗಳಿಂದ ಮಾನ್ಯ ಶ್ರೀ ಮಹಾದೇವ ದೇವಸ್ಥಾನದ ನಿಧಿ ಸಂಚಯನಕ್ಕೆ ಚಾಲನೆ
ಮಾನ್ಯ : ಮನುಷ್ಯ ಕೂಡಿಟ್ಟ ಧನ ಕನಕಗಳನ್ನು ಅರ್ಜಿಸಲು ಅನೇಕ ದಾರಿಗಳಿವೆ ಆದರೆ ಕ್ಷೇತ್ರ ನಿರ್ಮಾಣದಂತಹ ತಲೆತಲಾಂತರ ಮಹತ್ಕಾರ್ಯಗಳಿಗೆ ವಿನಿಯೋಗಿಸುವುದರಿಂದ ಜೀವನದಲ್ಲಿ ಪುಣ್ಯ ಸಂಚಯನವೂ ಆಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿಗಳು ನುಡಿದರು.
ಅವರು ಮಾನ್ಯದ ಶ್ರೀ ಮಹಾದೇವ ದೇವಸ್ಥಾನದ ನಿಧಿ ಸಂಚಯನಕ್ಕೆ ಚಾಲನೆ ನೀಡಿ ಸ್ವರ್ಣ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.ಕ್ಷೇತ್ರ ಸಾನಿಧ್ಯ ಪುನರ್ ನಿರ್ಮಾಣಗಳಿಗೆ ಊರವರ ಸಹಾಯ ಸಹಕಾರದ ಜತೆಗೆ ಪರವೂರಿನ ಆಸ್ತಿಕರನ್ನು ಸಂಪರ್ಕಿಸುವ ಕೊಂಡಿಯಾಗಬೇಕು ಎಂದರು.
ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿದ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರು ಅನುಗ್ರಹ ಮಾತುಗಳನ್ನಾಡುತ್ತಾ ದೈವ ದೇವರುಗಳ ಚಿತ್ತ ಇರುವ ತಲೆಮಾರಿಗೆ ಮಾತ್ರ ಕ್ಷೇತ್ರವೊಂದರ ಪುನರುದ್ಧಾರಣದ ಸೌಭಾಗ್ಯ ಲಭಿಸುತ್ತದೆ. ಇದೀಗ ನಮ್ಮೆಲ್ಲರ ಕೈಯಲ್ಲಿ ಈ ಪುಣ್ಯ ಕಾರ್ಯ ಆಗಬೇಕೆಂಬ ಮಹಾದೇವನ ಸಂಕಲ್ಪ ಇರಬಹುದು ಸಹಭಾಗಿಗಳಾಗುವ ಮೂಲಕ ಮುಂದಿನ ಪೀಳಿಗೆಗೆ ಉದಾತ್ತ ಸಂಸ್ಕೃತಿಯ ಸಂರಕ್ಷಕರಾಗೋಣ ಎಂದು ನುಡಿದರು. ವೇದಮೂರ್ತಿ ವಾಸುದೇವ ಕೊಳತ್ತಾಯ, ಕೃಷ್ಣಪ್ರಸಾದ ಅಡಿಗ, ಜಯದೇವ ಖಂಡಿಗೆ, ಶ್ರೀ ಕೃಷ್ಣ ಭಟ್ ಪುದುಕೋಳಿ ಶುಭಾಶಂಸನೆಗೈದರು. ಊರಿನ ಭಕ್ತಾದಿಗಳು ನಿಧಿ ಸಂಚಯನಕ್ಕೆ ತಮ್ಮ ಕಾಣಿಕೆಯನ್ನು ಅರ್ಪಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ವಾಗ್ದಾನವನ್ನು ಮಾಡಿದರು. ಮಹೇಶ್ ವಳಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮೋಹನ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಹಾಗೂ ಮಂಜುನಾಥ ಡಿ ಮಾನ್ಯ ನಿರೂಪಿಸಿದರು.ದೈವಜ್ಞರಾದ ಮಹಾಲಿಂಗೇಶ್ವರ ಶರ್ಮ ಕೊಳಚೆಪ್ಪು ಹಾಗೂ ಉಣ್ಣಿಕೃಷ್ಣನ್ ನಂಬೀಷನ್ ರವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಜರಗಿತು.
ಈ ಸಂದರ್ಭ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಯದೇವ ಖಂಡಿಗೆ, ಅಧ್ಯಕ್ಷರಾಗಿ ಶ್ರೀಕೃಷ್ಣ ಭಟ್ ಪುದುಕೋಳಿ, ಉಪಾಧ್ಯಕ್ಷರುಗಳಾಗಿ ರಾಮ ಕಾರ್ಮಾರು, ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ವಳಕುಂಜ, ಕಾರ್ಯದರ್ಶಿಗಳಾಗಿ ರವಿಶಂಕರ ಎಂ ವಿ ಮಾನ್ಯ, ಹಾಗೂ ಶಾಮ್ ಪ್ರಸಾದ್ ಮಾನ್ಯ, ಕೋಶಾಧಿಕಾರಿಗಳಾಗಿ ಮೋಹನ ಮಾನ್ಯ ಹಾಗೂ ಏಳು ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



0 Comments