Ticker

6/recent/ticker-posts

ಕೃಷಿಕರ ಸಮಸ್ಯೆ ಪರಿಹಾರಕ್ಕೆ ಕಿಸಾನ್ ಸೇನೆ ನೇತೃತ್ವದಲ್ಲಿ ಮೇ 5 ರಂದು ಬದಿಯಡ್ಕದಲ್ಲಿ ಅಡಿಕೆ ಕೃಷಿಕರ ಸಮಾವೇಶ



ಬದಿಯಡ್ಕ: ಹವಾಮಾನ ವೈಪರೀತ್ಯದಿಂದಾಗಿ ಕೃಷಿ ವಲಯಕ್ಕೆ ಭಾರೀ ಆಘಾತ ಉಂಟಾಗಿದೆ. ಬೆಳೆ ಕುಸಿತದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಪ್ರತ್ಯೇಕವಾಗಿ ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿಯು ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ಸಾವಿರಾರು ಕುಟುಂಬಗಳು ಅಡಿಕೆ ಕೃಷಿಯನ್ನೇ ಅವಲಂಬಿಸಿ ತಮ್ಮ ನಿತ್ಯ ಜೀವನ ನಡೆಸುತ್ತಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಅತಂತ್ರಕ್ಕೆ ಸಿಲುಕಿರುವ ಅಡಿಕೆ ಕೃಷಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಜಾಗೃತಿಗಾಗಿ ಮೇ. 5 ರಂದು ಸೋಮವಾರ ಕಿಸಾನ್ ಸೇನೆಯ ನೇತೃತ್ವದಲ್ಲಿ ಬದಿಯಡ್ಕದ ಗುರುಸದನದಲ್ಲಿ ಕೃಷಿಕರ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಿಸಾನ್ ಸೇನೆಯ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಿಂದ ಅಡಿಕೆ ಕೃಷಿಗೆ ವಿವಿಧ ತರದ ಮಾರಕ ರೋಗಗಳು ತಗುಲಿ ಅಡಿಕೆ ಬೆಳೆಯು ಸಾಧಾರಣ ಬೆಳೆಗಿಂತ ಶೇ. 80 ರಷ್ಟು ಕುಸಿದಿದ್ದು ಕೃಷಿಕರಿಗೆ ನಿತ್ಯ ಜೀವನ ನಡೆಸಲು ಪರದಾಡುವಂತಾಗಿದೆ. ರೋಗಕ್ಕೆ ಯಾವ ಔಷಧಿ ಸಿಂಪಡಿಸುವುದು ಎಂಬ ಸರಿಯಾದ ಮಾಹಿತಿ ಇಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬ್ಯಾಂಕುಗಳಿಂದ ಪಡೆದ ಕೃಷಿ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಲಾಗದೆ ಏಲಂ ಹಾಗೂ ಜಪ್ತಿಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಸಾನ್ ಸೇನೆಯ ನೇತೃತ್ವದಲ್ಲಿ ಒಂದು ನಿಯೋಗವು ಜಿಲ್ಲಾಧಿಕಾರಿ ಹಾಗೂ ಶಾಸಕರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳು ಜಿಲ್ಲಾ ಕೃಷಿ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ನೀಡುವಂತೆ ಆಗ್ರಹಿಸಿದ್ದರು. ಮಾತ್ರವಲ್ಲದೆ ಕೃಷಿಕರ ಸಭೆಯನ್ನು ಕರೆದು ಈ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿದ್ದರು. ಈ ಬಗ್ಗೆ ಈ ಸಭೆಯಲ್ಲಿ ಸ್ಥಳೀಯ ಶಾಸಕರು, ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಜಿಲ್ಲಾ ಕೃಷಿ ಅಧಿಕಾರಿಗಳು, ವಿವಿಧ ಕೃಷಿ ಸಂಘಟನೆಯ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯತ ಯಶಸ್ವಿಗೊಳಿಸಬೇಕಾಗಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ವಿನಂತಿಸಿದ್ದಾರೆ.

ಸಮಾವೇಶ ವಿವರ:

ಬೆಳಿಗ್ಗೆ 9 ಕ್ಕೆ ನೋಂದಣಿ, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶಾಸಕ ಎನ್.ಎ,ನೆಲ್ಲಿಕುನ್ನು ಉದ್ಘಾಟಿಸುವರು. ಕಿಸಾನ್ ಸೇನೆ ಮುಖ್ಯ ರಕ್ಷಾಧಿಕಾರಿ ಚಂದ್ರಶೇಖರ ರಾವ್ ಕಲ್ಲಗ ಪ್ರಾಸ್ತಾವಿಕವಾಗಿ ಮಾತನಾಡುವರು. ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು, ಮಂಜೇಶ್ವರ ಶಾಸಕ ಎ.ಕೆ.ಕೆಂ. ಅಶ್ರಫ್, ಕಾರಡಕ ಬ್ಲಾ.ಪಂ.ಅಧ್ಯಕ್ಷ ಸಿಜಿ ಮ್ಯಾಥ್ಯೂ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಾರಡ್ಕ, ಕಾರಡ್ಕ ಬ್ಲಾ.ಪಂ.ಸದಸ್ಯ ಕುಂಞಂಬು ನಂಬ್ಯಾರ್, ಬದಿಯಡ್ಕ ಗ್ರಾ.ಪಂ.ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ರಾಘವೇಂದ್ರ ಪಿ., ಜ್ಯೋತಿ ಕುಮಾರಿ ಕೆ.ಎನ್., ಅಶ್ವಿನಿ ಎಂ.ಎಲ್, ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿರುವರು. ನಾಸಿರ್ ಚೆರ್ಕಳ, ಬಿ.ರಾಜೇಂದ್ರ ಪ್ರಸಾದ್ ಶುಭಹಾರೈಸುವರು ಕಾಸರಗೋಡು ಸಿಪಿಸಿಆರ್.ಐ. ವಿಜ್ಞಾನಿಗಳಾದ ಡಾ.ಆರ್. ತವಾ ಪ್ರಕಾಶ್ ಪಾಂಡ್ಯನ್ ಹಾಗೂ ಡಾ.ಚೈತ್ರ ಎಂ., ಅಜಿತ್ ಕುಮಾರ್ ಉಪನ್ಯಾಸ ನೀಡುವರು.

ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ.ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾನಾಜೆ, ರಕ್ಷಾಧಿಕಾರಿ ಸುಲೈಖಾ ಮಾಹಿನ್, ಶಾಜಿ ಕಾಡಮನೆ, ಕಮರುದ್ದೀನ್ ಪಾಡ್ಲಡ್ಕ ಉಪಸ್ಥಿತರಿದ್ದು ಮಾಹಿತಿ ನೀಡಿದರು.

Post a Comment

0 Comments