ಬದಿಯಡ್ಕ: ಹೆರಿಗೆ ನೋವಿನಿಂದ ಚಡಪಡಿಸುತ್ತಿದ್ದ ಸಹೋದರಿಗೆ ಅಟಲ್ಜಿ ಸೇವಾ ಟ್ರಸ್ಟ್ ಅಂಬ್ಯುಲೆನ್ಸ್ ಆಸರೆಯಾಯಿತು. ಕನ್ನೆಪ್ಪಾಡಿ ಬಳಿಯ ಬಾಪಾಲಿಪನ ಬಾಡಿಗೆ ಮನೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಶಿವರಾಮರ ಪತ್ನಿ ಸುಮಿತ್ರ(25) ಇಂದು ಮುಂಜಾನೆ ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ, ಮಗು ಇದೀಗ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿದ್ದಾರೆ.
ಇಂದು ಮುಂಜಾನೆ ಬದಿಯಡ್ಕದ ವ್ಯಾಪಾರಿ ಹಾಗೂ ಬಿಜೆಪಿ ನೇತಾರ ಅವಿನಾಶ್ ರೈ ಅವರಿಗೆ ಬದಿಯಡ್ಕ ಪೊಲೀಸರು ಕರೆ ಮಾಡಿ, ಸುಮಿತ್ರಾಳ ಹೆರಿಗೆ ನೋವಿನ ಮಾಹಿತಿ ನೀಡಿದರು. ಅದರಂತೆ ಗೆಳೆಯ ಹಾಗೂ ಟಾಕ್ಸಿ ಚಾಲಕನಾಗಿರುವ ಚಿತ್ತರಂಜನ್ ಶೆಟ್ಟಿ(ರಂಜು) ಜತ ಅಂಬ್ಯುಲೆನ್ಸ್ ನೊಂದಿಗೆ ಧಾವಿಸಿದಾಗ ಪೊಲೀಸರು ಸುಮಿತ್ರಾಳನ್ನು ಕನ್ನೆಪ್ಪಾಡಿಯ ವರೆಗೆ ಕರೆದುಕೊಂಡು ಬಂದಿದ್ದರು. ಅನಂತರ ಆಕೆಯನ್ನು ಅಂಬ್ಯುಲೆನ್ಸ್ ಗೆ ಹತ್ತಿಸಿ ಕಾಸರಗೋಡು ಕಡೆಗೆ ಧಾವಿಸಲಾಯಿತು. ಮಧೂರು ತಲುಪುತ್ಗಿದ್ದಂತೆಯೇ ಸುಮಿತ್ರ ಗಂಡು ಮಗುವಿಗೆ ಜನ್ಮ ನೀಡಿದಳು. ಅನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸಕಾಲಕ್ಕೆ ಸ್ಪಂದಿಸಿದ ಬದಿಯಡ್ಕ ಪೊಲೀಸ್ ಠಾಣೆಯ ಎ.ಎಸ್.ಐ.ಸುಕುಮಾರನ್, ಅಂಬ್ಯುಲೆನ್ಸ್ ಚಲಾಯಿಸಿದ ಅವಿನಾಶ್ ರೈ, ಜತೆಗಿದ್ದ ಚಿತ್ತನಂಜನ್ ಶೆಟ್ಟಿ ಎಂಬಿವರನ್ನು ನಾಡಿನ ಜನತೆ ಶ್ಲಾಘಿಸಿದ್ದಾರೆ
0 Comments