ಪೆರ್ಲ : ಗುರು ಪರಂಪರೆಯಿಂದ ಸಂಸ್ಕೃತಿ ಉಳಿದು ಸಂಸ್ಕಾರ ಬೆಳೆಯುವುದು. ಗುರುಗಳ ಮೇಲಿನ ಭಕ್ತಿ ಹಾಗೂ ಶ್ರದ್ಧೆ ನಿಜವಾದ ಗುರುಭಕ್ತಿ. ಗುರುಕೃಪೆ ಹಾಗೂ ಗುರು ಬಲವಿದ್ದರೆ ಜೀವನ ಉಜ್ವಲವಾಗುವುದು. ಅಧ್ಯಾಪಕ ವೃತ್ತಿ ಶ್ರೇಷ್ಠ ವೃತ್ತಿ. ಅಧ್ಯಾಪಕರಿಗೆ ವೃತ್ತಿ ಹಾಗೂ ನಿವೃತ್ತಿಯ ಬಳಿಕವೂ ಗೌರವವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪೆರ್ಲ ಶ್ರೀ ಸತ್ಯನಾರಾಯಣ ಶಾಲೆಯ ಶಿಕ್ಷಕ ಡಾ.ಸತೀಶ್ ಪುಣಿಂಚತ್ತಾಯರ ನೇತೃತ್ವದಲ್ಲಿ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಗುರುಗಳು ಜೀವನದ ದಾರಿ ದೀಪ. ಓರ್ವ ಶಿಕ್ಷಕ ಹಾಗೂ ಯಕ್ಷಗಾನದ ಕಲಾವಿದನಾಗಿ ಕಲೆಯನ್ನು ಉಳಿಸಲು ಡಾ.ಪುಣಿಂಚಿತ್ತಾಯರು ಸಾಧನೆ ಮಾಡಿದ್ದಾರೆ. ಕಲೆಯನ್ನು ಉಳಿಸಿ ಬೆಳೆಸಲು ನಾವೆಲ್ಲಾ ಶ್ರಮಿಸಬೇಕು ಎಂದರು.
ಡಾ.ಪುಣಿಂಚತ್ತಾಯರ ಗುರುಗಳಾದ ಬಳ್ಳಂಬೆಟ್ಟು ಈಶ್ವರ ಭಟ್, ಎಸ್.ಪಿ.ಖಂಡಿಗೆ, ವಿ.ಬಿ.ಕುಳಮರ್ವ, ಎಚ್.ಎನ್.ಪರಮೇಶ್ವರ ಹೆಬ್ಬಾರ್, ಶಿವಕುಮಾರ್ ಕೆ., ಪ್ರಭಾವತಿ ಎಚ್.ವಿ., ಕಿಳಿಂಗಾರು ಸುಬ್ರಹ್ಮಣ್ಯ ಭಟ್, ಕುಸುಮಾವತಿ, ಪಾರ್ವತಿ ಸಹಿತ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪುಣಿಂಚಿತ್ತಾಯರ ಬೆಳವಣಿಗೆಯಲ್ಲಿ ಹೆಗಲು ನೀಡಿದ ಯಕ್ಷಗಾನ ಕಲಾವಿದರಾದ ದಿವಾನ ಶಿವಶಂಕರ ಭಟ್, ಸುಬ್ರಹ್ಮಣ್ಯ ಶಗ್ರಿತ್ತಾಯ, ಅಂಬೆಮೂಲೆ ಶಿವಶಂಕರ ಭಟ್, ಬಟ್ಯಮೂಲೆ ಲಕ್ಷ್ಮೀ ನಾರಾಯಣ ಭಟ್ ಹಾಗೂ ಶ್ರೀರಾಂ ಭಟ್ ಪೊಯ್ಯೆ, ದರ್ಬೆ ರಾಮ ಭಟ್, ಶಿವಗಿರಿ ಸೌಂಡ್ಸ್ ನ ಮಹಾಲಿಂಗ ನಾಯ್ಕ್ ಅವರನ್ನು ಗೌರವಿಸಲಾಯಿತು.
ಮಾರ್ಚ್ ನಲ್ಲಿ ನಿವೃತ್ತಿ ಹೊಂದಲಿರುವ ಡಾ.ಸತೀಶ್ ಪುಣಿಂಚಿತ್ತಾಯರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಶಿಕ್ಷಕ ಉದಯ ಶಂಕರ ಅಮೈ ನಿರೂಪಿಸಿದರು. ಬೆಳಗ್ಗೆ ಯಕ್ಷಗಾನ ವೈಭವ, ಮಧ್ಯಾಹ್ನ ಔತಣಕೂಟ, ಸಂಜೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ "ಬೇಡರ ಕಣ್ಣಪ್ಪ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

.jpeg)
0 Comments