ಬೆಂಗಳೂರು: ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಯಲ್ಲಿ 68,776 ಮೃತ ಮಹಿಳೆಯರ ಖಾತೆಗೆ ಹಣ ಜಮೆ ಮಾಡಿದ ಬಗ್ಗೆ ತಿಳಿದು ಬಂದಿದೆ. ಇದನ್ನು ತಡೆಗಟ್ಟಲು ಇದೀಗ ಸರಕಾರ ಯೋಜನೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಗೃಹಲಕ್ಷ್ಮಿ ಹಣ ದುರುಪಯೋಗ ತಡೆಗೆ ಡಿಕೆ ಸರ್ಕಾರದ ಹೊಸ ಹೆಜ್ಜೆಯಿಟ್ಟಿದೆ. ಸತ್ತವರ ಹೆಸರಿಗೂ ದುಡ್ಡು, ಹೆಸರೇ ಇಲ್ಲದ ಬ್ಯಾಂಕ್ಗೂ ಹಣ ಪಾವತಿ, ಕರ್ನಾಟಕದಲ್ಲಿ ಇಲ್ಲದೇ ಇರುವ ಬ್ಯಾಂಕ್ಗಳ ಖಾತೆಗೂ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. 68,776 ಮೃತ ಮಹಿಳೆಯರ ಅಕೌಂಟ್ಗೆ ಹಣ ಜಮೆ ಆಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 79 ಕೋಟಿಯಷ್ಟು ಸರ್ಕಾರದ ಹಣ ಪೋಲಾಗಿದೆ. ಬರೋಬ್ಬರಿ 79,75,66,000 ರೂ. ಸತ್ತ ಮಹಿಳೆಯರ ಅಕೌಂಟ್ಗೆ ಜಮೆಯಾಗಿದೆ. ಮೃತಪಟ್ಟವರಿಗೆ ಜಮೆಯಾದ ಹಣ ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ.
ಒಟ್ಟು 92 ಬ್ಯಾಂಕ್ಗಳಿಗೆ ಗೃಹಲಕ್ಷ್ಮೀಯರ ಮರಣದ ನಂತರವೂ ಹಣ ಪಾವತಿಯಾಗಿದೆ. ಇದೀಗ ಮೃತಪಟ್ಟವರ ಹೆಸರಲ್ಲಿ ಹಣ ಪಡೆಯುತ್ತಿರುವವರ ಪತ್ತೆ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಈಗಾಗಲೇ ಹಂತಹಂತವಾಗಿ ಹಣ ವಾಪಸ್ ಪಡೆಯಲಾಗುತ್ತಿದೆ.
ಮೃತಪಟ್ಟ ಮಹಿಳೆಯರ ಅಕೌಂಟ್ನ ಹಣ ಪಡೆಯಲು ಬ್ಯಾಂಕರ್ಸ್, ಬ್ಯಾಂಕ್ ಆಡಳಿತ ಮಂಡಳಿ ಜೊತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇ-ಗರ್ವನೆನ್ಸ್ ಅಧಿಕಾರಿಗಳು ಸಭೆ ಮಾಡಿದ್ದಾರೆ. ಹಣ ಡ್ರಾ ಮಾಡದೇ ಇರುವ ಖಾತೆಗಳಿಂದ ಇಲಾಖೆ ಹಣ ವಾಪಾಸ್ ಪಡೆದಿದೆ. ಆದರೆ, ಕೆಲ ಖಾತೆಗಳಲ್ಲಿ ಹಣ ಎಟಿಎಂ ಮೂಲಕ ಡ್ರಾ ಆಗಿದೆ ಎಂಬ ವಿಚಾರವೂ ಗಮನಾರ್ಹ.

0 Comments