ಪೆರ್ಲ : ಇತಿಹಾಸ ಪ್ರಸಿದ್ಧ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಪಡ್ರೆ ವಾಣೀನಗರ ಸಮೀಪದ ಪಾಲೆಪ್ಪಾಡಿ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಶನಿವಾರ ಸಾಮೂಹಿಕ ಶನಿ ಪೂಜೆ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣರಾಜ ಪುಣಿಂಚಿತ್ತಾಯ ನೇತೃತ್ವದಲ್ಲಿ ವಿಶೇಷ ಪೂಜೆ, ಶನಿ ದೇವರ ಆರಾಧನೆ ನಡೆಯಿತು. ಶನಿ ದೋಷ ನಿವಾರಣೆಗಾಗಿ ವಿಶೇಷ ಅರ್ಚನೆಗಳು ವೈದಿಕ ವಿಧಿವಿಧಾನಗಳೊಂದಿಗೆ ಜರುಗಿದವು. ನೂರಾರು ಭಕ್ತರು ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಸಂಪ್ರದಾಯದಂತೆ ಬಲಿವಾಡು ಕೂಟ ಸೇವೆ ನೆರವೇರಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಪಡ್ರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಶ್ರೀ ವನಶಾಸ್ತಾರ ಹಾಗೂ ಶನಿ ದೇವರ ಕೃಪೆಗೆ ಪಾತ್ರರಾದರು.

0 Comments