ಬದಿಯಡ್ಕ : ಖಾಸಗಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡವನ್ನು ಕೊರೆದು ಮಣ್ಣು ತೆರವುಗೊಳಿಸಿರುವುದರಿಂದ ಸಮೀಪದ ಮನೆ ಅಪಾಯದ ಅಂಚಿನಲ್ಲಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಕಂದಾಯ, ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬದಿಯಡ್ಕ ಪೆಟ್ರೋಲ್ ಬಂಕ್ ಸಮೀಪ ಖಾಸಗಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಕೊರೆದು ಮಣ್ಣು ತೆಗೆದಿದ್ದಾರೆ. ಇದರ ಪರಿಣಾಮವಾಗಿ ಸಮೀಪದಲ್ಲಿರುವ ನಿವೃತ್ತ ಗ್ರಾಮಾಧಿಕಾರಿ ದಿ. ಸುನಿಲ್ ಅವರ ಕುಟುಂಬ ವಾಸಿಸುವ ಮನೆಯ ಅಂಗಳದ ಒಂದು ಭಾಗ ಕುಸಿದಿದ್ದು, ಮನೆಗೆ ಹಾನಿಯಾಗುವ ಭೀತಿ ಎದುರಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮನೆ ಸಮೀಪದ ಕೊಳವೆಬಾವಿಯ ಪೈಪ್ಗಳಿಗೂ ಹಾನಿಯಾಗಿದ್ದು, ನಿರಂತರ ಮಳೆಯಿಂದ ಗುಡ್ಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಮನೆ ಹಾಗೂ ನಿವಾಸಿಗಳ ಸುರಕ್ಷತೆಗೆ ಗಂಭೀರ ಅಪಾಯ ಉಂಟಾಗಬಹುದು ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

0 Comments