ತಿರುವನಂತಪುರ : ಎಲ್ಪಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬವನ್ನು ಖಂಡಿಸಿ, ಪಿಎಸ್ಸಿ ರ್ಯಾಂಕ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ರಾಜ್ಯ ಸೆಕ್ರೆಟರಿಯೇಟ್ ಮುಂದೆ ಮಣ್ಣು ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
2025ರ ಮೇ 31ರಂದು ಪ್ರಕಟವಾದ ರ್ಯಾಂಕ್ ಪಟ್ಟಿಗೆ ಒಂದು ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆಗೆ ಇಳಿದರು. ಹಲವಾರು ಜಿಲ್ಲೆಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೂ ಇನ್ನೂ ನೇಮಕಾತಿ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ರ್ಯಾಂಕ್ ಪಟ್ಟಿಯಿಂದ ಅತ್ಯಲ್ಪ ಸಂಖ್ಯೆಯ ನೇಮಕಾತಿಗಳು ಮಾತ್ರ ನಡೆದಿವೆ ಎಂದು ಪ್ರತಿಭಟನಾಕಾರರು ದೂರಿದರು. ಕಳೆದ ಎಡ ಸರ್ಕಾರದ ಅವಧಿಯಲ್ಲಿಯೂ ಇದೇ ಬೇಡಿಕೆಗಾಗಿ ಪ್ರತಿಭಟನೆ ನಡೆಸಿದ್ದನ್ನು ಅವರು ನೆನಪಿಸಿದರು.
ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು ಮರುಪರಿಶೀಲಿಸಿ, ವಿಭಾಗ ನಷ್ಟ (ಡಿವಿಷನ್ ಫಾಲ್) ಎದುರಿಸುತ್ತಿರುವ ಶಿಕ್ಷಕರನ್ನು ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳಿಗೆ ಮರುನಿಯೋಜಿಸಬೇಕು. ನಿವೃತ್ತಿಯಿಂದ ತೆರವಾದ ಹುದ್ದೆಗಳನ್ನು ತಕ್ಷಣ ವರದಿ ಮಾಡಿ, ಎಲ್ಪಿ ಶಾಲಾ ಶಿಕ್ಷಕರ ನೇಮಕಾತಿಯನ್ನು ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಅಭ್ಯರ್ಥಿಗಳು ಸರಕಾರವನ್ನು ಒತ್ತಾಯಿಸಿದರು.

0 Comments