ಕಾಸರಗೋಡು : ಮದುವೆಗೆ ಕೆಲವೇ ದಿನಗಳು ಬಾಕಿಯಿದ್ದಾಗ ಎಸ್ ಬಿಐಯಲ್ಲಿ ಉದ್ಯೋಗದಲ್ಲಿದ್ದ ಪ್ರತಿಶ್ರುತ ವಧು-ವರರು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಾಸರಗೋಡು ಕಿಝಕ್ಕೇಕರೆ ನಿವಾಸಿ ಪಿ. ಅನುಶ್ರೀ (25) ಹಾಗೂ ಕಣ್ಣೂರು ಅಂಬತ್ತಟ್ಟು ನಿವಾಸಿ ಅಮಲ್ ಮೃತಪಟ್ಟವರು. ಇಬ್ಬರೂ ಕಳೆದ ಎರಡು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್ 26ರಂದು ಅವರ ವಿವಾಹ ನಿಗದಿಯಾಗಿತ್ತು.
ಅನುಶ್ರೀ ಮತ್ತು ಅಮಲ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಬಳಿಕ ಘಟನೆ ನಡೆದಿರುವುದು ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ. ಮೊದಲು ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಅಮಲ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೆ ಯಾವುದಾದರೂ ವಾಗ್ವಾದ ನಡೆದಿತ್ತೇ ಅಥವಾ ಬೇರೆ ಕಾರಣದಿಂದ ಈ ನಿರ್ಧಾರ ಕೈಗೊಂಡರೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಅನುಶ್ರೀ ಕರ್ನಾಟಕದ ಹುಣಸೂರಿನಲ್ಲಿರುವ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಮಲ್ ಎರ್ನಾಕುಳಂನ ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆಯಲ್ಲಿ ಇಬ್ಬರ ಮೊಬೈಲ್ ಫೋನ್ಗಳು ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವುಗಳನ್ನು ಪರಿಶೀಲಿಸಲಿದ್ದಾರೆ. ಇಬ್ಬರ ನಡುವಿನ ಚಾಟ್, ಫೋನ್ ಕರೆಗಳು, ವೀಡಿಯೊ ಕರೆಗಳು ಹಾಗೂ ಇತರ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸಿ ಸಾವಿಗೆ ಮುನ್ನ ಏನಾಯಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಮಂಗಳವಾರ ರಾತ್ರಿವರೆಗೆ ಅನುಶ್ರೀ ಹುಣಸೂರು ಎಸ್ ಬಿಐ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾಗಿ ಅನುಶ್ರೀ ಅವರ ಸಹೋದರಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಅಮಲ್ ಕರೆ ಮಾಡಿದ್ದ ವಿಚಾರವನ್ನೂ ಅನುಶ್ರೀ ಹೇಳಿದ್ದಾಗಿ ಕುಟುಂಬದವರು ತಿಳಿಸಿದ್ದಾರೆ. ಆದರೆ ನಂತರ ಇಬ್ಬರ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹುಣಸೂರು ಪೊಲೀಸರು ಪಂಚನಾಮೆ ನಡೆಸಿದ ಬಳಿಕ ಅನುಶ್ರೀ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ಸಂಜೆ ವೇಳೆಗೆ ಮೃತದೇಹವನ್ನು ಪೂಚ್ಚಕ್ಕಾಡಿನ ಮನೆಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಪ್ರಕರಣದ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮೊಬೈಲ್ ಚಾಟ್ಗಳು ಮತ್ತು ಇತರ ಡಿಜಿಟಲ್ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.

0 Comments