ಕಾಸರಗೋಡು: ಓಣಂ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಕುಟುಂಬಶ್ರೀ ಉತ್ಪನ್ನಗಳ ಜಿಲ್ಲಾ ಮಟ್ಟದ ಓಣಂ ಮಾರಾಟ ಮೇಳಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಮೇಳವನ್ನು ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಲೆಕ್ಟರ್ ಅರ್ಜುನ್ ಪಾಂಡ್ಯನ್ ಮುಖ್ಯ ಅತಿಥಿಯಾಗಿದ್ದರು.
ನಾಟಿ ರುಚಿಯ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಿ ಎಲ್ಲರಿಗೂ ಓಣಂ ಸಂಭ್ರಮ ತಲುಪಿಸುವುದು ಕುಟುಂಬಶ್ರೀ ಜಿಲ್ಲಾ ಮಿಷನ್ನ ಉದ್ದೇಶವಾಗಿದೆ.
ಮೇಳದಲ್ಲಿ ಕುತಾಂಪಳ್ಳಿ ಕೇರಳ ಸೀರೆಗಳು, ನಾಡಿನ ತರಕಾರಿಗಳು, ವಿವಿಧ ಬಗೆಯ ಉಪ್ಪಿನಕಾಯಿ, ಬೆಲ್ಲ, ಚಿಪ್ಸ್, ಓಣಂ ಹೂವುಗಳು ಹಾಗೂ ವಿವಿಧ ಬಗೆಯ ಪಾಯಸ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಿವೆ. ಓಣಂಗೆ ಅಗತ್ಯವಿರುವ ದಿನಬಳಕೆಯ ವಸ್ತುಗಳನ್ನು ಒಳಗೊಂಡ ವಿಶೇಷ ಓಣಂ ಕಿಟ್ಗಳನ್ನೂ ಕುಟುಂಬಶ್ರೀ ಮಾರುಕಟ್ಟೆಗೆ ತಂದಿದೆ.
ಜಿಲ್ಲಾ ಮಟ್ಟದ ಮೇಳದ ಜೊತೆಗೆ ಜಿಲ್ಲೆಯ ಎಲ್ಲಾ ಸಿಡಿಎಸ್ಗಳಲ್ಲಿ ತಲಾ ಎರಡು ಓಣಂ ಮಾರಾಟ ಮೇಳಗಳನ್ನು ಆಯೋಜಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಸಮೀಪದ ಮೇಳಗಳಿಂದ ಓಣಂ ಮಾರುಕಟ್ಟೆಯ ಸೌಲಭ್ಯ ಪಡೆಯಬಹುದು.
ಜಿಲ್ಲಾ ಪಂಚಾಯತ್ ಸದಸ್ಯ ಕೆ. ಸಬೀಶ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಕೆ.ಎಸ್. ಶಾರೋನ್ ವಾಸ್, ಚೆಂಗಳ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಕೀನಾಬಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಕೆ.ಎಂ. ಕಿಶೋರ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಟಿ. ಜಿತಿನ್ ವಂದಿಸಿದರು.

0 Comments