ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ ಕೃಷಿಭವನದ ನೇತೃತ್ವದಲ್ಲಿ ಓಣಂ ತರಕಾರಿ ಸಂತೆ ಶನಿವಾರ ಬದಿಯಡ್ಕ ಇಕೋಶಾಪ್ನಲ್ಲಿ ಆರಂಭವಾಯಿತು. ಮೂರು ದಿನಗಳ ಕಾಲ ನಡೆಯಲಿರುವ ಓಣಂ ಸಂತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು.
ಓಣಂ ಸಮೃದ್ಧಿಯ ಸಂಕೇತವಾಗಿದ್ದು, ಹಬ್ಬದ ಸಂಭ್ರಮವನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ರೈತರು ಬೆಳೆದ ವಿಷಮುಕ್ತ ಹಾಗೂ ತಾಜಾ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಕೃಷಿಭವನದ ಮೂಲಕ ಈ ಸಂತೆ ಆರಂಭಿಸಲಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರು ಶ್ರಮಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಹಾಗೂ ನ್ಯಾಯಯುತ ಬೆಲೆ ದೊರೆಯಲಿದೆ.
ಸ್ಥಳೀಯ ಸಾರ್ವಜನಿಕರಿಗೆ ರಾಸಾಯನಿಕಗಳ ಬಳಕೆಯಿಲ್ಲದ, ತಾಜಾ ಹಾಗೂ ಆರೋಗ್ಯಕರ ತರಕಾರಿಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲಾಗುವುದು. ಕೃಷಿಭವನದ ಅಧಿಕಾರಿಗಳು ಹಾಗೂ ಇಕೋಶಾಪ್ ಸಿಬ್ಬಂದಿ ಸಂತೆಯನ್ನು ಯಶಸ್ವಿಯಾಗಿ ಆಯೋಜಿಸಲು ಶ್ರಮಿಸಿದ್ದಾರೆ. ಅವರ ಕಾರ್ಯ ಅಭಿನಂದನೀಯ ಎಂದು ಅವರು ಹೇಳಿದರು.
ಕೃಷಿ ಅಧಿಕಾರಿ ಬಿಂದು ಜೋರ್ಜ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶಾಹಿನಾ, ಶ್ಯಾಮಪ್ರಸಾದ ಸರಳಿ, ಕೃಷಿಕರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ಕೃಷಿ ಅಧಿಕಾರಿ ಮೋಹನನ್ ವಂದನಾರ್ಪಣೆ ಮಾಡಿದರು.

0 Comments