Ticker

6/recent/ticker-posts

ಸೇರಾಜೆಯಲ್ಲಿ ಸಂಚಾರಕ್ಕೆ ಭೀತಿಯನ್ನೊಡ್ಡುವ ತೋಟಗಾರಿಕಾ ಇಲಾಖೆಯ ಮರಗಳು - ರಸ್ತೆ ಅಭಿವೃದ್ಧಿಗೂ ಅಡ್ಡಿ


ಪೆರ್ಲ : ಕುರೆಡ್ಕದಿಂದ ಸಂಚರಿಸುವ  ಸೋಮಾಜೆ - ಸೇರಾಜೆ ರಸ್ತೆಯ ಬದಿಗಳಲ್ಲಿ ಬೃಹತ್ ಆಕಾರದ ಮರಗಳು ಬೆಳೆದು ನಿಂತು ಸಂಚಾರಕ್ಕೆ ಭೀತಿ ಉಂಟು ಮಾಡುತ್ತಿದ್ದು ರಸ್ತೆ ಅಭಿವೃದ್ಧಿಗೂ ಅಡಚಣೆಯಾಗಿದೆ.  


ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ನೆರೆಯ ಪುತ್ತಿಗೆ ಗ್ರಾಮ ಪಂಚಾಯತನ್ನು ಸಂಪರ್ಕಿಸುವ ಕುರೆಡ್ಕ ಸೇರಾಜೆ ಶಿರಿಯ ಅಣೆಕಟ್ಟು ದೇರಡ್ಕ ರಸ್ತೆಯು ಇದೀಗ ಅಭಿವೃದ್ಧಿಯಾಗುತ್ತಿದ್ದು ಇಲ್ಲಿನ ತೋಟಗಾರಿಕ ಇಲಾಖೆಗೆ ಸೇರಿದ ಈ ಮರಗಳು ಅಡ್ಡಿಯಾಗುತ್ತಿದ್ದು ಇದನ್ನು ತೆರವುಗೊಳಿಸಬೇಕೆಂದು  ಆಗ್ರಹಿಸಿ  ಸ್ಥಳೀಯ ನ್ಯಾಯವಾದಿಯೋರ್ವರು ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಈ ಬಗ್ಗೆ ತೋಟಗರಿಕಾ ಇಲಾಖೆಗೆ  ದೂರು ನೀಡಿದ್ದು ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಈ ರಸ್ತೆಯ ನಿತ್ಯ ಸಂಚಾರಿಯಾದ ನ್ಯಾಯವಾದಿ ಪ್ರತೀಕ್ಷಾ ಪೂಜಾರಿ ಎಂಬವರು ಕಳೆದ ನಾಲ್ಕು ತಿಂಗಳ ಹಿಂದೆ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ನಾಲ್ಕು ತಿಂಗಳಿಂದ ಕೇಸು ನಡೆಯುತ್ತಿತ್ತು.   ಇದರಂತೆ ಪ್ರಕರಣ ಪರಿಶೀಲಿಸಿದ ನ್ಯಾಯಾಲಯ ಸಂಚಾರಕ್ಕೆ ತೊಡಕಾಗುವ ಮರಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಆದರೆ ಇದುವರೆಗೂ ಇಲಾಖೆ ಮರ ತೆರವಿಗೆ ಯಾವುದೇ ಕ್ರಮಕೈಗೊಳ್ಳಲು ಮುಂದಾಗದಿರುವುದು ಸ್ಥಳೀಯರನ್ನು ಆಕ್ರೋಶಿತರನ್ನಾಗಿಸಿದೆ.ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಈ ಸಂದರ್ಭ ಶೀಘ್ರ ಮರ ತೆರವುಗೊಳಿಸಿದರೆ ಮಾತ್ರ ಅಭಿವೃದ್ಧಿಗೆ ಪೂರಕವಾಗಬಹುದು. ಈ ಬಗ್ಗೆ ಕ್ರಮ‌ಕೈಗೊಳ್ಳದಿದ್ದರೆ ಜನಾಂದೋಲನಕ್ಕೆ ಮುಂದಾಗುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Post a Comment

0 Comments