Ticker

6/recent/ticker-posts

ತುಳುನಾಡ ಬಂಟ ಮನೆತನದ ಕಂಬಳ ಕೊಂಡಿ ಕುಳೂರು ಬೀಡು ಕೆ. ದಾಸಣ್ಣ ಆಳ್ವ ಅಸ್ತಂಗತ




ಮಂಜೇಶ್ವರ: ಕುಳೂರು ಬೀಡು ಮನೆತನದ ಹಿರಿಯ ಸದಸ್ಯ ಧಾರ್ಮಿಕ, ಸಾಮಾಜಿಕ ರಂಗದ ಹರಿಕಾರ ಕುಳೂರು ಬೀಡು ಕೆ. ದಾಸಣ್ಣ ಆಳ್ವ (93) ಇಂದು ಮುಂಜಾನೆ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದಾಗಿ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ದಿವಂಗತ ಕೊಡಿಂಗಾರ್ ಫಕೀರ ಶೆಟ್ಟಿ - ಕುಳೂರು ಬೀಡು ಕಮಲಮ್ಮ ದಂಪತಿಗಳ ಪುತ್ರರಾಗಿದ್ದು, ಮೃತರು ಅವಿವಾಹಿತರಾಗಿದ್ದರು. ಮೃತರು ಸಹೋದರ - ಸಹೋದರಿಯರಾದ: ಜಗನ್ನಾಥ ಆಳ್ವ, ಕಿನ್ನಿಯಣ್ಣ ಆಳ್ವ, ಜನಾರ್ಧನ ಆಳ್ವ, ಸುಮತಿ ಹೆಗ್ಡೆ ಈ ಹಿಂದೆಯೇ ನಿಧನರಾಗಿದ್ದಾರೆ. ಕುಳೂರು ಗ್ರಾಮದ ಕುಳೂರು ಬೀಡು ಮನೆತನದಲ್ಲಿ ಜನಿಸಿದ ಕೆ. ದಾಸಣ್ಣ ಆಳ್ವರವರು, ಪರಂಪರಾಗತವಾಗಿ ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆದುಕೊಂಡು ಬರುತ್ತಿರುವ "ಕುಳೂರು ಕಂಬಳ" ವನ್ನು ಶತಮಾನದಿಂದ ತನ್ನ ಹಿರಿಯರ ಮುಂದಾಳತ್ವ ಬಳಿಕ ಇವರೇ ಅದನ್ನ ಇದೀಗ ಮುಂದುವರಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದು, ಕೃಷಿ ಚಟುವಟಿಕೆಗಳ ಜೊತೆ, ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು. ಕುಳೂರು ಕರ್ಬಂಡೆ ಶ್ರೀ ಧೂಮವತೀ ದೈವಸ್ಥಾನದ ಆಡಳಿತ ನಡೆಸುತ್ತಾ, ಕ್ಷೇತ್ರವನ್ನು ಮುನ್ನಡೆಸುತ್ತಿದ್ದರು. ಅಲ್ಲದೇ ಗ್ರಾಮದ ಮಾಗಣೆ ದೇವರಾದ ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತಸರು, ಕ್ಷೇತ್ರ ನಿರ್ಮಾಣದಲ್ಲೂ ಹಲವಾರು ಕೊಡುಗೆಗಳನ್ನು ನೀಡಿದ್ದರು. ಬಂಟರ ಯಾನೆ ನಾಡವರ ಸಂಘದ ಮಂಜೇಶ್ವರ ಫಿರ್ಕದ ಸ್ಥಾಪಕ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಈಗಿನ ಕನ್ನಡ ಸರಕಾರಿ ಶಾಲೆಯಾಗಿರುವ ಕುಳೂರು ಶಾಲೆಯ ಸ್ಥಾಪಕರಲ್ಲೋರ್ವರಾಗಿದ್ದಾರೆ. ಮೃತರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಊರ ಹಾಗೂ ಪರವೂರಿನ ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ವಿವಿಧ ಸಂಘ ಸಂಸ್ಥೆಗಳು ಗಾಢವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಅಪರಾಹ್ನ 3.30 ಕ್ಕೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments