ಪೆರ್ಲ : ಪ್ರಜಾಪ್ರಭುತ್ವದಲ್ಲಿ ಚುನಾವಣೆ ಜನಪ್ರತಿನಿಧಿಗಳ ಆಯ್ಕೆಗೆ ಮಾತ್ರ ಸೀಮಿತವಾಗಿರಬೇಕು ಆಯ್ಕೆಗೊಂಡ ನಂತರ ಗೆದ್ದವರು ಅಭಿವೃದ್ಧಿಯ ಸಾರಥಿ ಆಗಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಕರೆ ನೀಡಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯರಾಗಿ ಆಯ್ಕೆ ಹೊಂದಿದ ವಿದ್ಯಾಶ್ರೀ ಹಾಗೂ ಪಂಚಾಯತ್ ನ 12ನೇ ವಾರ್ಡಿನಿಂದ ಆಯ್ಕೆ ಹೊಂದಿದ ಕೃಷ್ಣಪ್ಪ ಬಜಕೂಡ್ಲು ಅವರಿಗೆ ಬಜಕೂಡ್ಲಿನಲ್ಲಿ ಗೃಹ ಸನ್ಮಾನ ನೆರವೇರಿಸಿ ಮಾತನಾಡುತ್ತಾ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿಯ ಚುಕ್ಕಾಣಿಯನ್ನು ಹಿಡಿದು ಜನಪ್ರತಿನಿಧಿಗಳು ಕೆಲಸ ನಿರ್ವಹಿಸಿದರೆ ವಿಕಸಿತ ಭಾರತದ ಪರಿಕಲ್ಪನೆ ಸಾಕಾರಗೊಳ್ಳುತ್ತದೆ. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಎಂದು ಸಾರಿದ ಮಹಾತ್ಮ ಗಾಂಧೀಜಿಯವರ ಸಂಕಲ್ಪ ಈಡೇರಬೇಕಾದರೆ ಪ್ರಾಮಾಣಿಕತೆಯಿಂದ ಜನಸೇವೆಯ ಕಾಯಕವನ್ನು ರೂಢಿಸಿಕೊಂಡ ಜನಪ್ರತಿನಿಧಿಗಳು ಮಾತ್ರ ಜನಮನದಲ್ಲಿ ಸದಾ ಉಳಿಯುತ್ತಾರೆ ಎಂದು ಅವರು ಹೇಳಿದರು.
ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಶಿವಾನಂದ ಪೆರ್ಲ ಮಾತನಾಡಿ ಇಬ್ಬರು ನಮ್ಮ ಕ್ಲಬ್ ನ ಸದಸ್ಯರಾಗಿದ್ದು ಅವರ ಜನಪರ ಕಾಳಜಿಯನ್ನು ಮೆಚ್ಚಿ ಜನ ಆಯ್ಕೆ ಮಾಡಿ ಸೇವೆಗೆ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು. ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಸುಂದರ ಸುವರ್ಣ ಮಾತನಾಡಿ ಸದಸ್ಯರಾಗಿ ಆಯ್ಕೆ ಹೊಂದಿರುವುದು ಅಧಿಕಾರವಲ್ಲ ಜನರ ದುಃಖ ದುಮ್ಮಾನಗಳಿಗೆ ಸ್ಪಂದನೆ ನೀಡಲು ಜನರು ನೀಡಿದ ಅವಕಾಶ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಜಯ ಸಾಧಿಸಿದ ನೂತನ ಸದಸ್ಯರಿಗೆ ಶಾಲು, ಪೇಟ ಹಾಗೂ ಹಾರಗಳೊಂದಿಗೆ ಗೌರವಿಸಲಾಯಿತು. ವಿದ್ಯಾಕುಮಾರಿ ಹಾಗೂ ಕೃಷ್ಣಪ್ಪ ಬಜಕೂಡ್ಲು ಸನ್ಮಾನಕ್ಕೆ ಪ್ರತ್ಯುತ್ತರಿಸಿದರು.
ಕಾರ್ಯಕ್ರಮದಲ್ಲಿ ಪೆರ್ಲ ಸಹಕಾರಿ ಬ್ಯಾಂಕಿನ ಅಡ್ಯನಡ್ಕ ಶಾಖೆಯ ಉಸ್ತುವಾರಿ ಮ್ಯಾನೇಜರ್ ಪದ್ಮನಾಭ ಸುವರ್ಣ, ಉಷಾ ವಸಂತ್, ಸೃಜನ ಸುವರ್ಣ, ವಿಭವ್, ಶ್ರಾವ್ಯ, ಗೌಶಿಕ್, ವಿನೋದ್ ಸುವರ್ಣ ಸುಳ್ಯಪದವು, ಚಾರ್ವಿ ಮತ್ತಿತರರು ಉಪಸ್ಥಿತರಿದ್ದರು.

0 Comments