ಕಾಸರಗೋಡು : ಮದ್ಯಪಾನಗೈದು ಚುನಾವಣಾ ಕರ್ತವ್ಯಕ್ಕೆ ಬಂದ ಕಾಞಂಗಾಡು ಕಂಟ್ರೋಲ್ ರೂಂ ನ ಪೊಲೀಸ್ ಸಿಬಂದಿ ಪ್ರಿಸೈಡಿಂಗ್ ಆಫೀಸರ್ ಆಗಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಮುಳಿಯಾರು ಗ್ರಾ. ಪಂ. ನ ಬೋವಿಕ್ಕಾನ ಎಯುಪಿ ಶಾಲಾ ಬೂತಿನಲ್ಲಿ ನಡೆದಿದೆ. ಪ್ರಿಸೈಡಿಂಗ್ ಆಫೀಸರ್ ಕರ್ತವ್ಯಕ್ಕೆ ನೇಮಕಗೊಂಡ ಅನಸೂಯ ಎಂಬವರು ಬುಧವಾರ ಸಂಜೆ ಚುನಾವಣಾ ಸಾಮಗ್ರಿ ಸಹಿತ ಆಗಮಿಸಿದ್ದ ವೇಳೆ ಮುಂಡು, ಶರ್ಟ್ ತೊಟ್ಟು ಬಂದಿದ್ದ ವ್ಯಕ್ತಿಯನ್ನು ಅವರು ಪ್ರಶ್ನಿಸಿದ್ದರು. ಈ ವೇಳೆ ತಾನು ಪೊಲೀಸ್ ಸಿಬ್ಬಂದಿ ಎಂದಾತ ಹೇಳಿದ್ದನು. ಪೊಲೀಸಾದರೆ ಸಮವಸ್ತ್ರದಲ್ಲಿರಬೇಡವೇ ಎಂದು ಪ್ರಶ್ನಿಸಿದಾಗ ಅಧ್ಯಾಪಕಿಯಾದರೆ ಸೀರೆ ಸುತ್ತಬೇಡವೇ ಎಂದು ಮರು ಪ್ರಶ್ನಿಸಿದ್ದನು. ಆತನ ವರ್ತನೆ, ಮಾತು ಕಂಡು ಶಂಕೆ ಹೊಂದಿದ ಅವರು ಕೂಡಲೇ ನಾರ್ಕೋಟಿಕ್ ಸೆಲ್ ಡಿವೈಎಸ್ಪಿಗೆ ಮಾಹಿತಿ ನೀಡಿದರು. ಅವರ ನಿರ್ದೇಶನದಂತೆ ಆದೂರು ಠಾಣಾಧಿಕಾರಿ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸುವ ವೇಳೆ ಪೊಲೀಸ್ ಎಂದಾತ ಕೋಣೆಯೊಳಗೆ ನಿದ್ರಿಸುತ್ತಿದ್ದರು. ಬಳಿಕ ಆತನನ್ನು ಎಬ್ಬಿಸಿ ಅಮಲು ಸೇವನೆಯ ಪರೀಕ್ಷೆ ನಡೆಸಬೇಕಾಗಿದೆ ಎಂದು ತಿಳಿಸಿದಾಗ ಆತ ಬ್ಯಾಗ್ ಸಹಿತ ಓಡಿ ಪರಾರಿಯಾಗಿದ್ದ. ಮದ್ಯಪಾನ ಮಾಡಿದ ಅಮಲಿನಲ್ಲಿ ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಮಹಿಳೆಯೊಂದಿಗೆ ಅನುಚಿತ ವರ್ತಿಸಿದ ಪ್ರಕರಣದಲ್ಲಿ ಕಾಞಂಗಾಡು ಕಂಟ್ರೋಲ್ ರೂಂ ನ ಪೊಲೀಸ್ ಸಿಬ್ಬಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

0 Comments