ಬೆಳ್ಳೂರು: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಲ್ಪಿ ವಿಭಾಗದ ಎರಡು ತರಗತಿಗಳ ಹಳೆಯ ಕಟ್ಟಡದ ಸುತ್ತಲೂ ಖಾಸಗಿ ವ್ಯಕ್ತಿಯೊಬ್ಬರು ಸಿಮೆಂಟ್ ಕಂಬಗಳನ್ನು ಊರಿ, ತಂತಿ ಬೇಲಿ ನಿರ್ಮಿಸಿರುವುದು, ಸ್ಥಳೀಯರಾದ ಕೆಲವರು ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿ ಬೇಲಿ ನಾಶಪಡಿಸಿರುವುದು ವಿವಾದವಾಗಿತ್ತು. ಬೆಳ್ಳೂರಿನಲ್ಲಿ ಶಾಲೆ ಆರಂಭಿಸಲು ಓಲೆಸಿರಿ ಎಂ.ಶಂಕರನಾರಾಯಣ ಕಡಂಬಳಿತ್ತಾಯರು (ಎಂ.ಎಸ್.ಕಡಂಬಳಿತ್ತಾಯ) ತನ್ನ ಸ್ವಲ್ಪ ಜಾಗವನ್ನು ದಾನ ಮಾಡಿದ್ದರು. ತನ್ನ ದೊಡ್ಡಪ್ಪ ಶಂಕರ ಕಡಂಬಳಿತ್ತಾಯರ ಸ್ಮರಣಾರ್ಥ ಶಾಲೆಗಾಗಿ ಕಟ್ಟಡವನ್ನೂ ನಿರ್ಮಿಸಿಕೊಟ್ಟಿದ್ದರು. 1947 ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಶಾಲೆ ಆರಂಭವಾಗಿತ್ತು. ಕಟ್ಟಡದ ಶಿಲಾಫಲಕದಲ್ಲಿ ಇದನ್ನು ದಾಖಲಿಸಲಾಗಿದೆ. ಎಂ.ಶಂಕರನಾರಾಯಣ ಕಡಂಬಳಿತ್ತಾಯರಿಗೆ ಮಕ್ಕಳಿಲ್ಲದ ಕಾರಣ ತನ್ನ ಸಹೋದರ ಪುತ್ರನನ್ನು ದತ್ತು ಪಡೆದಿದ್ದರು. ಎಂ.ಶಂಕರನಾರಾಯಣ ಕಡಂಬಳಿತ್ತಾಯರ ನಿಧನದ ಬಳಿಕ ಶಾಲೆಯ ಜಾಗಕ್ಕೆ ಸಂಬಂಧಿಸಿ ವಿವಾದ ಏರ್ಪಟ್ಟಿದೆ. ಅವರ ಸಹೋದರ ಮತ್ತು ಮಕ್ಕಳು ಜಾಗಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದಕ್ಕೆ ಸಂಬಂಧಿಸಿದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಮಧ್ಯೆ, ಕಿಫ್ಬಿ ಯೋಜನೆಯಡಿ ಶಾಲೆಯ ನೂತನ ಕಟ್ಟಡ ನಿರ್ಮಿಸುವ ಪ್ರಕ್ರಿಯೆ ಆರಂಭವಾದಾಗ, ಶಂಕರನಾರಾಯಣ ಕಡಂಬಳಿತ್ತಾಯರ ಸಹೋದರ ಮತ್ತು ಮಕ್ಕಳು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ನಿರ್ಮಾಣ ಕೆಲಸ ಮಾಡದಂತೆ ನ್ಯಾಯಾಲಯ ಆದೇಶಿಸಿತ್ತು. ಈ ನಡುವೆ ಕಂದಾಯ ಅಧಿಕಾರಿಗಳು ಅಥವಾ ತಾಲೂಕು ಸರ್ವೇಯರ್ ಇಲ್ಲದೆ ವಿವಾದಿತ ಜಾಗದಲ್ಲಿ ಬೇಲಿ ನಿರ್ಮಿಸಲಾಗಿತ್ತು. ನ್ಯಾಯಾಲಯದ ಅನುಕೂಲಕರ ತೀರ್ಪು ಎಂದು ಹೇಳುತ್ತಿದ್ದರೂ ತೀರ್ಪಿನ ಪ್ರತಿಯನ್ನು ಜಿಲ್ಲಾ ಪಂಚಾಯಿತಿಗಾಗಲಿ, ಶಿಕ್ಷಣ ಇಲಾಖೆಗಾಗಲಿ ನೀಡಲಾಗಿಲ್ಲ ಎಂದು ಶಾಲೆಗೆ ಸಂಬಂಧಿಸಿದವರು ಆರೋಪಿಸಿದ್ದಾರೆ. ಖಾಸಗಿ ಜಾಗವನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದರೆ, ಶಿಕ್ಷಣ ಇಲಾಖೆ ಅದನ್ನು ವಹಿಸಿಕೊಂಡು ಕಟ್ಟಡವನ್ನು ನಿರ್ಮಿಸುವುದಕ್ಕೂ ಮುನ್ನ ಜಾಗದ ಮಾಲೀಕತ್ವವನ್ನು ರಾಜ್ಯಪಾಲರ ಹೆಸರಲ್ಲಿ ಸರಕಾರ ನೋಂದಾಯಿಸಬೇಕಾಗಿತ್ತೆಂದೂ, ಹೀಗಾಗದಿದ್ದಲ್ಲಿ ಜಾಗದ ಮಾಲೀಕತ್ವ ಇನ್ನೂ ದಾನ ಮಾಡಿದವರ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗೆ ಇರುವುದು ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಸುಮಾರು ಎಂಟು ವರ್ಷಗಳಿಂದ ಜಾಗದ ತಕರಾರು ನಡೆಯುತ್ತಿದೆ. ಶಾಲೆಯ ಕಟ್ಟಡದ ಸುತ್ತಲೂ ಬೇಲಿ ನಿರ್ಮಿಸಿದುದರ ವಿರುದ್ಧ ಆದೂರು ಪೊಲೀಸ್ ಠಾಣೆ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಬೇಲಿ ನಾಶಕ್ಕೆ ಸಂಬಂಧಿಸಿ ಜಾಗದ ವಾರಿಸುದಾರರೂ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇದೇ ವೇಳೆ, ಶಾಲೆಯ ಸುತ್ತ ಬೇಲಿ ನಿರ್ಮಾಣ ಮತ್ತು ಕೆಡವಿದ ವಿಚಾರದಲ್ಲಿ ಕೆಲವು ಪಕ್ಷಗಳು ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದಾಗಿಯೂ, ವಿಷಯ ಕೈಮೀರಿ ಹೋದಾಗ ನುಣುಚಿಕೊಂಡಿರುವುದಾಗಿಯೂ ಹೇಳಲಾಗುತ್ತಿದೆ. ಮಂಗಳವಾರ ಸಂಜೆ ಕಮಿಷನಿಂಗ್ ನಿಯೋಜಿಸಲಾದ ವಕೀಲರ ತಂಡ, ಆದೂರು ಸಿಐ, ಎಸ್ ಐ ಅವರನ್ನು ಒಳಗೊಂಡ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಸಮಸ್ಯೆಯನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿರುವುದಾಗಿಯೂ ಮಾಹಿತಿ ಇದೆ ಎನ್ನಲಾಗಿದೆ. ಇದೀಗ ಫ್ರೌಢ ಶಾಲಾ ವಿದ್ಯಾರ್ಥಿಗಳು ಬೇಲಿಯನ್ನು ತೆರವುಗೊಳಿಸಿದ್ದಾರೆ.

0 Comments