ಮಂಗಳೂರು : ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದು, 2 ವರ್ಷದ ಮಗು ಅನಾಥವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆಯಲ್ಲಿ ನಡೆದಿದೆ. ಬಜಗೋಳಿ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆ ನಿವಾಸಿ ಸಂಗೀತಾ ಮೃತಪಟ್ಟ ದಂಪತಿ. ಪತಿ ದಿನೇಶ್ ಪತ್ನಿ ಸಂಗೀತಾಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆಲಂಕಾರು ಪೇಟೆಯಲ್ಲಿ ದಿನೇಶ್ ಹೋಟೆಲ್ ನಡೆಸುತಿದ್ದರು.
ಮಗುವಿನೊಂದಿಗೆ ಕಜೆಯ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಕೆಲ ದಿನಗಳಿಂದ ದಂಪತಿಯ ನಡುವೆ ಕುಟುಂಬ ಕಲಹ ಉಂಟಾಗಿದೆ. ಒಂದು ತಿಂಗಳ ಹಿಂದೆ ಮನೆ ಬಿಟ್ಟು ದಿನೇಶ್ ತೆರಳಿದ್ದರು. ನಿನ್ನೆ ಏಕಾಏಕಿ ದಿನೇಶ್ ಮನೆಗೆ ಮರಳಿದ್ದರು. ಇಂದು ಮನೆಯಲ್ಲಿ ಯಾವುದೇ ಚಲನವಲನ ಕಂಡು ಬರದ ಹಿನ್ನೆಲೆಯಲ್ಲಿ ಮನೆಕಡೆ ಕುಟುಂಬಸ್ಥರು ಬಂದಿದ್ದರು.
ಮನೆಯಲ್ಲಿ ರಕ್ತದ ಮಡುವಿನಲ್ಲಿ ಸಂಗೀತಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ದಿನೇಶ್ ಮೃತ ದೇಹ ಪತ್ತೆಯಾಗಿದೆ. ಸಂಗೀತಾಳ ಪಕ್ಕದಲ್ಲೆ ಎರಡು ವರ್ಷದ ಮಗು ನಿದ್ರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಡಬ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

0 Comments