ಕೋಝಿಕ್ಕೋಡ್ : ರಾಜ್ಯದಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ನಡೆಸುತ್ತಿರುವ ‘ಆಪರೇಷನ್ ತೂಫಾನ್’ ಕಾರ್ಯಾಚರಣೆಯ ಭಾಗವಾಗಿ, ಐಷಾರಾಮಿ ಹೋಟೆಲ್ಗಳನ್ನು ತಾತ್ಕಾಲಿಕ ನೆಲೆಯನ್ನಾಗಿ ಮಾಡಿಕೊಂಡು ಎಂಡಿಎಂಎ ಮಾರಾಟ ಮತ್ತು ವಿತರಣೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಮೂಲದ ರಿಷಬ್, ನನ್ಮಂಡ ನಿವಾಸಿ ಅನಂದು ಹಾಗೂ ಪುತಿಯಾಪ್ಪ ಮೂಲದ ಕೀರ್ತನಾ ಬಂಧಿತರು. ಜೂನ್ 8ರಂದು ಕೋಝಿಕ್ಕೋಡ್ ನ ನಡೆಯ್ಕಾವು ಪ್ರದೇಶದಲ್ಲಿ ಪೊಲೀಸ್ ವಾಹನ ಕಂಡು ಕಾರು ಬಿಟ್ಟು ಪರಾರಿಯಾಗಿದ್ದ ಆರೋಪಿಗಳು ಇವರೇ ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಕಾರಿನ ಪರಿಶೀಲನೆ ನಡೆಸಿದಾಗ 6 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು.
ಅಂದಿನಿಂದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು, ನಡೆಯ್ಕಾವು ಹಾಗೂ ಕುನ್ನಂಕುಳಂ ಠಾಣಾ ಪೊಲೀಸರು ಮತ್ತು ಡ್ಯಾನ್ಸಾಫ್ ತಂಡದ ಸಹಯೋಗದಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
ತನಿಖೆಯಲ್ಲಿ, ಆರೋಪಿಗಳು ಐಷಾರಾಮಿ ಹೋಟೆಲ್ಗಳಲ್ಲಿ ಕೊಠಡಿ ಬಾಡಿಗೆಗೆ ಪಡೆದು ಅಲ್ಲಿಯೇ ತಂಗಿ ಎಂಡಿಎಂಎ ಮಾರಾಟ ಮತ್ತು ವಿತರಣೆ ನಡೆಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಕೀರ್ತನಾ ಯುವಕರನ್ನು ಕೊಠಡಿಗೆ ಕರೆಸಿಕೊಳ್ಳುತ್ತಿದ್ದು ಬಳಿಕ ಅಲ್ಲಿ ಮಾದಕ ವಸ್ತು ವ್ಯವಹಾರ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಎಂಡಿಎಂಎ ಸೇರಿದಂತೆ ಮಾದಕ ವಸ್ತು ಬಳಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಅನಂದು ವಿರುದ್ಧ ಈಗಾಗಲೇ ಮೂರು ಎಂಡಿಎಂಎ ಪ್ರಕರಣಗಳು ದಾಖಲಾಗಿದ್ದು, ಯುವತಿಯೋರ್ವಳಿಗೆ ಥಾರ್ ಜೀಪ್ ಡಿಕ್ಕಿ ಹೊಡೆದು ಸಾವಿಗೆ ಕಾರಣವಾದ ಪ್ರಕರಣದಲ್ಲಿಯೂ ಆತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments