ಮೀಯಪದವು : ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮವನ್ನು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸುಂಕದಕಟ್ಟೆ ವಲಯದ ಮೇಲ್ವಿಚಾರಕರಾದ ವಿನಯ ಶೆಟ್ಟಿ ಅವರು ಮಾತನಾಡಿ, "ಮಾದಕ ವಸ್ತುಗಳ ಹಾವಳಿಯು ಸಮಾಜವನ್ನು ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು ಅದಕ್ಕೆ ದಾಸರಾಗದೆ ಸಮಾಜದ ಹಿತಕ್ಕಾಗಿ ಕಾರ್ಯೋನ್ಮುಖರಾಗಬೇಕು" ಎಂದರು. ಶಾಲಾ ಪ್ರಬಂಧಕ ಡಾ. ಜಯಪ್ರಕಾಶ ನಾರಾಯಣ, ಗ್ರಾಮಾಭಿವೃದ್ಧಿ ಯೋಜನೆಯ ಮೀಂಜ ವಲಯದ ಸೇವಾ ಪ್ರತಿನಿಧಿ ಅಶ್ವಿನಿ ಕಿರಣ್, ಪ್ರಾಂಶುಪಾಲ ರಮೇಶ್ ಕೆ ಎನ್, ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಚೇರಿಯ ಮಾರ್ಗದರ್ಶನದಲ್ಲಿ ಗೂಗಲ್ ಮೀಟ್ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹರೀಶ ಜಿ ಸ್ವಾಗತಿಸಿ, ವಿನಯ ಶೆಟ್ಟಿ ವಂದಿಸಿದರು.

0 Comments