ತಿರುವನಂತಪುರ : ವಿಝಿಂಜಂನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೂವರು ಮೀನುಗಾರರನ್ನು ಕರಾವಳಿ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿ ರಕ್ಷಿಸಿದ್ದಾರೆ. ಸನು, ರಾಬಿನ್ಸನ್ ಹಾಗೂ ಬಾಬು ಎಂಬವರನ್ನು ಕರಾವಳಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆಯ ವೇಳೆ ಪತ್ತೆಹಚ್ಚಿದೆ. ನಡು ಸಮುದ್ರದಲ್ಲಿ ಅವರ ದೋಣಿ ಮಗುಚಿ ಬಿದ್ದ ಪರಿಣಾಮ ಮೂವರೂ ಅಪಾಯದ ಸ್ಥಿತಿಯಲ್ಲಿದ್ದರು ಎಂದು ತಿಳಿದುಬಂದಿದೆ. ಮೂವರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಮಧ್ಯಾಹ್ನದ ವೇಳೆಗೆ ಕರಾವಳಿಗೆ ಕರೆತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ಇವರು ಸೋಮವಾರ ಮರಳಬೇಕಾಗಿದ್ದರೂ ವಾಪಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಆತಂಕಗೊಂಡಿದ್ದರು. ಬಳಿಕ ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ದೊರೆತ ತಕ್ಷಣ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮೊದಲಿಗೆ ಸ್ನೇಹಿತರು ಮತ್ತು ಇತರ ಮೀನುಗಾರರು ಹುಡುಕಾಟ ನಡೆಸಿದ್ದು, ನಂತರ ಮೀನುಗಾರಿಕಾ ಇಲಾಖೆ ಹಾಗೂ ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಬಾಡಿಗೆ ಶೋಧ ದೋಣಿಗಳಾದ ‘ಆಳಿಮಲ ಶಿವನ್’ ಹಾಗೂ ‘ಕೇದಾರನಾಥ್’ ಮೂಲಕವೂ ವ್ಯಾಪಕ ಹುಡುಕಾಟ ನಡೆಸಲಾಯಿತು.
ಸಮುದ್ರದ ಪ್ರವಾಹ ದಕ್ಷಿಣದತ್ತ ಹರಿಯುತ್ತಿದ್ದ ಕಾರಣ ಕನ್ಯಾಕುಮಾರಿ ಹಾಗೂ ಕುಳಚ್ಚಲ್ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ಕೇಂದ್ರೀಕರಿಸಲಾಗಿತ್ತು. ಅಂತಿಮವಾಗಿ ಕರಾವಳಿ ಪೊಲೀಸ್ ತಂಡ ಮೂವರು ಮೀನುಗಾರರನ್ನು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

0 Comments