ಬರಹ : ಶ್ರಾವ್ಯ ಭಟ್ ಸ್ವರ್ಗ
"ಯೋಗೇನ ಚಿತ್ತಸ್ಯ ಪದೇನ ವಾಚಾಂ..." ಎಂಬ ಪತಂಜಲಿ ಮಹರ್ಷಿಗಳ ಶ್ಲೋಕವು ಯೋಗದ ಮಹತ್ವವನ್ನು ತಿಳಿಸುತ್ತದೆ. ಮನಸ್ಸು, ದೇಹ ಮತ್ತು ಆತ್ಮದ ಶುದ್ಧಿಗೆ ಯೋಗ ಅತ್ಯುತ್ತಮ ಮಾರ್ಗವಾಗಿದೆ.
ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ಮುಖ್ಯವಾಗಿ ಮಾಡಬೇಕಾಗಿರುವುದು ಯೋಗ. ಹಠ, ಕೋಪ, ಸಿಟ್ಟು ಇವೆಲ್ಲವನ್ನೂ ಕರಗಿಸುವ ಗುಣ ಯೋಗದಲ್ಲಿದೆ. ಮೈ, ಕೈ ಜೊತೆಗೆ ಮನಸ್ಸಿನ ನೋವನ್ನೂ ನಿವಾರಿಸುವ ಶಕ್ತಿ ಯೋಗಕ್ಕಿದೆ.
ಜನರಿಗೆ ಯೋಗದ ಮಹತ್ವ ತಿಳಿಸಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಾಂತಿ ನೀಡುವ ಕ್ರಿಯೆಯೇ ಯೋಗ. ಇದು ಭಾರತದ ಪಾರಂಪರಿಕ ಕಲೆಯಾಗಿರುವುದರ ಜೊತೆಗೆ ನಮ್ಮ ದಿನನಿತ್ಯದ ಜೀವನದ ಒಂದು ಭಾಗವಾಗಿದೆ.
ಇಂದಿನ ಜೀವನದಲ್ಲಿ ಹಲವಾರು ಮಂದಿ ವಿವಿಧ ರೀತಿಯ ಒತ್ತಡಗಳನ್ನು ಅನುಭವಿಸುತ್ತಿದ್ದಾರೆ. ಕೆಲಸ, ಓದು, ಕುಟುಂಬ ಹೀಗೆ ಒಂದಲ್ಲ ಒಂದು ಕಾರಣದಿಂದ ಮನಸ್ಸು ದಣಿಯುವುದು ಸಹಜ. ಇಂತಹ ಸಮಯದಲ್ಲಿ ಯೋಗವು ನಮ್ಮ ಜೀವನಕ್ಕೆ ಸಮತೋಲನ ತಂದುಕೊಡಲು ಸಹಾಯ ಮಾಡುತ್ತದೆ.
ಯೋಗವು ಕೇವಲ ವ್ಯಾಯಾಮ ಮಾತ್ರ ಎಂದು ತುಂಬಾ ಜನ ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು. ಯೋಗವು ಕೇವಲ ವ್ಯಾಯಾಮವಲ್ಲ, ಅದು ಒಂದು ಜೀವನ ಶೈಲಿ. ಸರಳವಾದ ಆಸನಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಹಾಗೂ ಧ್ಯಾನದ ಮೂಲಕ ನಾವು ನೆಮ್ಮದಿ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.
ಬೆಳಗ್ಗಿನ ಜಾವ ಬೇಗನೆ ಎದ್ದು ಸ್ವಲ್ಪ ಹೊತ್ತು ಧ್ಯಾನ ಮತ್ತು ಪ್ರಾಣಾಯಾಮದ ಅಭ್ಯಾಸ ಮಾಡಲು ಶುರು ಮಾಡಿ. ದಿನೇ ದಿನೇ ನಿಮ್ಮ ಜೀವನಶೈಲಿಯಲ್ಲೇ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ. ಹೊಸ ಉತ್ಸಾಹ ಮತ್ತು ಚೈತನ್ಯವನ್ನು ನೀಡುವ ಶಕ್ತಿ ಯೋಗಕ್ಕಿದೆ. ಮೊದಲಿಗೆ ಸ್ವಲ್ಪ ಕಷ್ಟ ಅನಿಸಬಹುದು. ಆದರೆ ದಿನದಿಂದ ದಿನಕ್ಕೆ ಅಭ್ಯಾಸ ಮಾಡುತ್ತಾ ಹೋದರೆ ಕಷ್ಟ ಎನ್ನುವ ಪದವೇ ಮರೆತು ಹೋಗುತ್ತದೆ. ಆಗ ಯೋಗ ನಮ್ಮ ದಿನಚರಿಯ ಒಂದು ಭಾಗವಾಗಿ ಬಿಡುತ್ತದೆ.
ಯೋಗ ಮಾನಸಿಕ ನೆಮ್ಮದಿ, ಮನಸ್ಸು ಹಾಗೂ ದೇಹದ ಶುದ್ಧಿ, ಒತ್ತಡ ನಿವಾರಣೆಗೆ ಇರುವ ಒಳ್ಳೆಯ ಮದ್ದು ಎಂದು ಹೇಳಬಹುದು. ಆದ್ದರಿಂದ ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಂತೋಷದ ಬದುಕಿಗಾಗಿ ಯೋಗವನ್ನು ನಮ್ಮ ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳೋಣ. ಯೋಗ ಒತ್ತಡವನ್ನು ಕಡಿಮೆ ಮಾಡಿ, ನೆಮ್ಮದಿಯಿಂದ ಬದುಕಲು ಸಹಾಯ ಮಾಡುವ ಉತ್ತಮ ಮಾರ್ಗವಾಗಿದೆ.

0 Comments