ತಿರುವನಂತಪುರ : ಭಾರತ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ ಮೇಲೆ ವಿಧಿಸಲಾಗಿದ್ದ ಮೂರು ವರ್ಷದ ನಿಷೇಧವನ್ನು ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಹಿಂಪಡೆದಿದೆ.
ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ದೃಶ್ಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಕೆಸಿಎ ಶ್ರೀಶಾಂತ್ ಮೇಲೆ ಮೂರು ವರ್ಷಗಳ ನಿಷೇಧ ಹೇರಿತ್ತು. ಈ ಕ್ರಮವನ್ನು ಪ್ರಶ್ನಿಸಿ ಶ್ರೀಶಾಂತ್ ತಿರುವನಂತಪುರಂ ಮುನ್ಸಿಫ್ ನ್ಯಾಯಾಲಯದ ಮೊರೆ ಹೋಗಿದ್ದರೂ, ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಕೆಸಿಎ ವಿರುದ್ಧ ಮಾಡಿದ್ದ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಶ್ರೀಶಾಂತ್ ಅಧಿಕೃತವಾಗಿ ಕ್ಷಮೆಯಾಚನೆ ಸಲ್ಲಿಸಿದ್ದರು.
ಜುಲೈ 1ರಂದು ನಡೆದ ಕೆಸಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ಶ್ರೀಶಾಂತ್ ಅವರ ಕ್ಷಮಾಪಣೆಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅವರು ಯಾವುದೇ ಷರತ್ತುಗಳಿಲ್ಲದೆ ವಿಷಾದ ವ್ಯಕ್ತಪಡಿಸಿರುವುದನ್ನು ಪರಿಗಣಿಸಿ, ನಿಷೇಧವನ್ನು ಹಿಂಪಡೆಯಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು. ಆದರೆ, ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮರುಕಳಿಸಿದರೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಸಿಎ ಶ್ರೀಶಾಂತ್ ಅವರಿಗೆ ಎಚ್ಚರಿಕೆ ನೀಡಿದೆ.
ನಿಷೇಧ ತೆರವಾಗಿರುವ ಹಿನ್ನೆಲೆಯಲ್ಲಿ ಕೇರಳ ಕ್ರಿಕೆಟ್ ಲೀಗ್ (ಕೆಸಿಎಲ್) ಮೂರನೇ ಸೀಸನ್ ನಲ್ಲಿ 'ಏರೀಸ್ ಕೊಲ್ಲಂ ಸೇಲರ್ಸ್' ತಂಡದ ಸಹ-ಮಾಲೀಕರಾಗಿ ಶ್ರೀಶಾಂತ್ ಮುಂದುವರಿಯಲು ಅವಕಾಶ ದೊರೆತಿದೆ. ಕಳೆದ ಕೆಸಿಎಲ್ ಸೀಸನ್ ನ ಆರಂಭಕ್ಕೂ ಮುನ್ನವೇ ಕೆಸಿಎ ಶ್ರೀಶಾಂತ್ ವಿರುದ್ಧ ನಿಷೇಧ ಕ್ರಮ ಕೈಗೊಂಡಿತ್ತು.

0 Comments