ಕಾಸರಗೋಡು : ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿರುವ ಆರೋಪಿ ಖಾದರ್ ಕರಿಪ್ಪೊಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಬಿಡುಗಡೆ ಮಾಡಿ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ವಿಡಿಯೊದಲ್ಲಿ ಮಾಧ್ಯಮಗಳು ಹಾಗೂ ದೂರುದಾರನ ವಿರುದ್ಧವೂ ಆತ ಆರೋಪ ಮಾಡಿದ್ದಾರೆ.
ತಾನು ಪಾಲುದಾರನಾಗಿರುವ ಕಂಪನಿಯಿಂದ ದೂರುದಾರ ಒಂದು ವರ್ಷದ ಹಿಂದೆ ಸರಕುಗಳನ್ನು ಖರೀದಿಸಿದ್ದು, ಇದುವರೆಗೆ ಹಣ ಪಾವತಿಸಿಲ್ಲ ಎಂದು ಖಾದರ್ ಆರೋಪಿಸಿದ್ದಾ. ಹಣ ನೀಡುವಂತೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನೂ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.
ಹಣ ಪಡೆದಿದ್ದರೆ ಅದನ್ನು ಮರಳಿಸುವ ಪ್ರಾಮಾಣಿಕತೆ ತೋರಬೇಕು. ಹಣ ಕೇಳಿದ್ದ ತನ್ನ ಕರ್ನಾಟಕ ಮೂಲದ ವ್ಯಾಪಾರ ಪಾಲುದಾರನನ್ನು ದೂರುದಾರ ಅವಮಾನಿಸಿದ್ದಾನೆ ಎಂದು ಖಾದರ್ ವಿಡಿಯೊದಲ್ಲಿ ಹೇಳಿದ್ದಾನೆ.
ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಪಳ್ಳಿಕ್ಕೆರೆ ನಿವಾಸಿ ಅಬ್ದುಲ್ ಅಹದ್ ಮೇಲೆ ಖಾದರ್ ಕರಿಪ್ಪೊಡಿ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿ ಕಾಸರಗೋಡು ಟೌನ್ ಪೊಲೀಸರು ಇತ್ತೀಚೆಗೆ ಕೊಲೆಯತ್ನ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಖಾದರ್ ಕರಿಪ್ಪೊಡಿ ಸೇರಿದಂತೆ ರಾಶಿದ್ ಮತ್ತು ಅಶ್ರಫ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಅಬ್ದುಲ್ ಅಹದ್ ಅವರನ್ನು ಕರೆಸಿಕೊಂಡು ಇಂಟರ್ಲಾಕ್ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಪೆನ್ನೈಫ್ನಿಂದ ಇರಿದು ಕೊಲೆ ಮಾಡಲು ಯತ್ನಿಸಿ, ಕಬ್ಬಿಣದ ರಾಡಿನಿಂದಲೂ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಅಬ್ದುಲ್ ಅಹದ್ ಕಾಸರಗೋಡು ಸಹಕಾರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಟೌನ್ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

0 Comments