ನವದೆಹಲಿ : ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಮೃತದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಹಲವು ಪ್ರಮುಖ ಅಂಗಗಳು ಕಾಣೆಯಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಹಾಗೂ ಭಾರತೀಯ ನಾವಿಕರ ಸಂಘಗಳ ಒಕ್ಕೂಟ (FSUI) ಆಗ್ರಹಿಸಿದೆ.
ಉತ್ತರ ಪ್ರದೇಶದ ಡಿಯೋರಿಯಾ ಮೂಲದ 33 ವರ್ಷದ ರಾಕೇಶ್ ಚೌಹಾಣ್ ಮೇ ತಿಂಗಳಲ್ಲಿ ವೆನೆಜುವೆಲಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ತಿಳಿಸಲಾಗಿತ್ತು. ಬಳಿಕ ಅವರ ಮೃತದೇಹವನ್ನು ದಕ್ಷಿಣ ಅಮೆರಿಕದಿಂದ ಭಾರತಕ್ಕೆ ರವಾನಿಸಲಾಯಿತು. ಆದರೆ ಭಾರತದಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹಲವು ಅನುಮಾನಗಳಿಗೆ ಕಾರಣವಾಗುವ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಕುಟುಂಬ ಆರೋಪಿಸಿದೆ.
ಎಫ್ಎಸ್ಯುಐ ನೀಡಿರುವ ಮಾಹಿತಿಯ ಪ್ರಕಾರ, ವೆನೆಜುವೆಲಾದಿಂದ ಮೃತದೇಹವನ್ನು ಯಾವುದೇ ಮರಣೋತ್ತರ ಪರೀಕ್ಷೆಯ ವರದಿ ಅಥವಾ ಸಂಬಂಧಿತ ವೈದ್ಯಕೀಯ ದಾಖಲೆಗಳಿಲ್ಲದೆ ಭಾರತಕ್ಕೆ ಕಳುಹಿಸಲಾಗಿದೆ. ಕುಟುಂಬದ ಒತ್ತಾಯದ ಮೇರೆಗೆ ಭಾರತದಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಿದಾಗ ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಗುಲ್ಮ, ಮೇದೋಜೀರಕ ಗ್ರಂಥಿ, ಕರುಳು, ಥೈರಾಯ್ಡ್ ಸೇರಿದಂತೆ ಹಲವು ಪ್ರಮುಖ ಅಂಗಗಳು ದೇಹದಲ್ಲಿ ಇರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಘಟನೆ ಹೇಳಿದೆ.
ಇದಲ್ಲದೆ, ಮೃತದೇಹದ ಕುತ್ತಿಗೆಯಿಂದ ಹೊಟ್ಟೆಯ ಕೆಳಭಾಗದವರೆಗೆ 22 ಹೊಲಿಗೆಗಳು ಹಾಗೂ ಒಂದು ಕಿವಿಯಿಂದ ಮತ್ತೊಂದು ಕಿವಿವರೆಗೆ 21 ಹೊಲಿಗೆಗಳನ್ನು ಹಾಕಲಾಗಿತ್ತು. ದೇಹವನ್ನು ಸುಮಾರು ಒಂದು ತಿಂಗಳ ಕಾಲ ಶೀತಲೀಕರಣದಲ್ಲಿ ಇರಿಸಲಾಗಿದ್ದ ಕಾರಣ ಹಾಗೂ ಪ್ರಮುಖ ಅಂಗಗಳು ಇಲ್ಲದಿರುವುದರಿಂದ ಸಾವಿನ ನಿಖರ ಕಾರಣವನ್ನು ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎಫ್ಎಸ್ಯುಐ ತಿಳಿಸಿದೆ.
ಈ ಪ್ರಕರಣವು ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ನಾವಿಕರ ಸುರಕ್ಷತೆ, ಮೃತದೇಹಗಳ ನಿರ್ವಹಣೆಯಲ್ಲಿನ ಪಾರದರ್ಶಕತೆ ಹಾಗೂ ವಿದೇಶಿ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಘಟನೆ ಹೇಳಿದ್ದು, ಪ್ರಕರಣದ ಕುರಿತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

0 Comments