ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಅವರು ಬಡಜನತೆಗೆ ಉಚಿತವಾಗಿ ಕೊಡಮಾಡುವ ವಿವಿಧ ಸೌಲಭ್ಯಗಳ ವಿತರಣೆ ಶುಕ್ರವಾರ ಕಿಳಿಂಗಾರು ಸಾಯಿನಿಲಯದಲ್ಲಿ ಜರಗಿತು. ಸಾಯಿರಾಂ ಗೋಪಾಲಕೃಷ್ಣ ಭಟ್ಟರ ನಂತರ ಅವರ ಪುತ್ರ ಕೆ.ಎನ್.ಕೃಷ್ಣ ಭಟ್ ಹಾಗೂ ಕುಟುಂಬವು ಬಡಜನತೆಯ ಆಶಾಕಿರಣವಾಗಿ ಮುಂದುವರಿಯುತ್ತಿರುವುದರ ಭಾಗವಾಗಿ ಮದುವೆಗೆ ಧನಸಹಾಯ, ಮನೆ ರಿಪೇರಿ, ಹೊಲಿಗೆ ಯಂತ್ರ ವಿತರಣೆ ಮೊದಲಾದ ಸೇವಾಕಾರ್ಯಗಳು ನಡೆಯುತ್ತಿದೆ. ಒಂದು ಕಾಲಿಗೆ ಬಲವಿಲ್ಲದ ಅಮ್ಮು ಮುಕಾರಿಗದ್ದೆ ಎಂಬವರ ಮಗಳ ವಿವಾಹಕ್ಕೆ 20000 ರೂಪಾಯಿಯನ್ನು ಕುಲಪುರೋಹಿತರಾದ ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಅವರು ಹಸ್ತಾಂತರಿಸಿದರು. ಪೆರ್ಲದ ಕಿಶನ್ ಕುಮಾರ್ ಎಂಬವರಿಗೆ ಮನೆ ರೀಪೇರಿಗೆ 20000 ರೂ, ಆಟೋಚಾಲಕ ಚಂದ್ರಗೋಪಾಲ ಕಾಕುಂಜೆ ಎಂಬವರ ಪತ್ನಿ ಲತಾ ಕುಮಾರಿ ಇವರಿಗೆ ವೈದ್ಯಕೀಯ ಸಹಾಯವಾಗಿ ರೂ.20000 ಹಾಗೂ ರೋಶಿನಿ ಕೆ.ಎಂ.ನೀರ್ಚಾಲು, ಕುಮುದಾ ನಾಯ್ಕಾಪು, ಆಯಿಶತ್ ಸಜನಾ ಬಿರ್ಮಿನಡ್ಕ, ಹೇಮಲತಾ ಕಟ್ಟತ್ತಂಗಡಿ ಮತ್ತು ಪಲ್ಲವಿ ಎನ್.ಕೆ.ನಲ್ಕ ಇವರಿಗೆ ಹೊಲಿಗೆ ಯಂತ್ರಕ್ಕಾಗಿ ಧನಸಹಾಯ ಹಸ್ತಾಂತರಿಸಲಾಯಿತು. ಸಾಯಿರಾಂ ಕೆ.ಎನ್.ಕೃಷ್ಣಭಟ್ ಹಾಗೂ ಪುತ್ರ ವೇಣುಗೋಪಾಲ ಕೆ.ಎನ್. ಅವರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಎಂ., ಉದನೇಶ್ವರ ಭಟ್ ಅಳಿಕೆ, ಸುಬ್ಬಣ್ಣ ಭಟ್, ಮಹೇಶ್ ಪಿ., ಶಾಂತಿ, ಸಂದೇಶ್, ಶಿವಕುಮಾರ್, ರವಿ ಮದನಗುಳಿ, ಸಂಜೀವ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments