ಕಾಸರಗೋಡು: ಬಾವಿ ಸ್ವಚ್ಛಗೊಳಿಸಲು ಇಳಿಯುವಾಗ ಹಗ್ಗ ತುಂಡಾಗಿ 80 ಅಡಿ ಆಳದ ಬಾವಿಗೆ ಬಿದ್ದಿದ್ದ ಕಾರ್ಮಿಕನನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು. ಇಂದು ಬೆಳಗ್ಗೆ ಚೆಂಗಳ ಪಂಚಾಯತ್ನ ವಾರ್ಡ್ 15ರ ಚೆರೂರಿನಲ್ಲಿ ಈ ಘಟನೆ ಸಂಭವಿಸಿದೆ.
ಕಾರ್ಮಿಕ ಅಬ್ದುಲ್ ರೆಹಮಾನ್ (52) ಅವರ ಕಾಲು ಮತ್ತು ಭುಜಕ್ಕೆ ಗಾಯಗಳಾಗಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಲೈಮಾನ್ ಎಂಬ ವ್ಯಕ್ತಿಗೆ ಸೇರಿದ 80 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸಲು ಅಬ್ದುಲ್ ರೆಹಮಾನ್ ಇಳಿದಿದ್ದು ಹಗ್ಗ ತುಂಡಾಗಿ ಬಾವಿಗೆ ಬಿದ್ದಿದ್ದರು. ಮೇಲೆ ಇನ್ನಿತರ ಇಬ್ಬರು ಕಾರ್ಮಿಕರು ಇದ್ದ ಕಾರಣ ಘಟನೆಯ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಸನ್ನಿ ಇಮ್ಯಾನುಯೆಲ್ ನೇತೃತ್ವದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಗೋಕುಲ್ ಕೃಷ್ಣನ್ ಬಾವಿಗೆ ಇಳಿದು ರಿಂಗ್ ನೆಟ್ ಸಹಾಯದಿಂದ ಅಬ್ದುಲ್ ರೆಹಮಾನ್ ಅವರನ್ನು ಹೊರತೆಗೆದರು. ಅಗ್ನಿಶಾಮಕ ದಳದ ತಂಡದಲ್ಲಿ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಎಂ. ರಮೇಶ, ಕೆ.ಆರ್. ಅಜೇಶ್, ಮತ್ತು ಗೃಹರಕ್ಷಕ ದಳದ ವಿಜಿತ್ ನಾಥ್, ಸುಭಾಷ್ ಮತ್ತು ಸೋಬಿನ್ ಇದ್ದರು.

0 Comments