ವರ್ಕಾಡಿ : ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರಿಂದ ಪುನರ್ ಪ್ರತಿಷ್ಠಾಪಿಸಲ್ಪಟ್ಟ ದೇವೇಂದ ಪಡ್ಪು ಮಹಾವಿಷ್ಣು ದೇವಸ್ಥಾನದಲ್ಲಿ ಪಲಿಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯೊಂದಿಗೆ ಹಾಗೂ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಯವರ ಮಾರ್ಗದರ್ಶನದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೇ 2ರಂದು ಶನಿವಾರ ಬಹಳ ವಿಜೃಂಭಣೆಯಿಂದ ನಡೆಯಲಿರುವುದು. ಈ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಅರ್ಚಕರಾದ ರಾಘವೇಂದ್ರ ಆಚಾರ್ಯರು ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಗಡಿ ಪ್ರಧಾನರಾದ ನೆತ್ತಿಲ ಬಾಳಿಕೆ ದೇವು ಶೆಟ್ಟಿ, ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಮೊರ್ಲ, ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ನೆತ್ತಿಲ, ಸದಸ್ಯ ಪ್ರೇಮಾನಂದ ರೈ ನೆತ್ತಿಲ ಕೋಡಿ, ಮಾಧವ ಪೂಜಾರಿ ಕುದುಕೋರಿ, ರವಿ ಮುಡಿಮಾರು, ಕೇಶವ ಕಜೆ ಕಿನ್ಯ, ಶಾಂಭ ನಾಯ್ಗ ಕೆದುಂಬಾಡಿ, ಅಲ್ಲದೆ ಮಹಿಳಾ ಸಮಿತಿಯ ಸದಸ್ಯೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ 8:00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಯಾಗ, ನಂತರ ಮನುಸೂಕ್ತ ಹೋಮ, ವಾಯು ಸ್ತುತಿ ಪುರಸ್ಚರಣ ಹೋಮ, ಪ್ರಧಾನ ಹೋಮ,ಕಲಶಾಭಿಷೇಕ, ಶ್ರೀ ನಾಗದೇವರ ಮತ್ತು ರಕ್ತೇಶ್ವರಿ ಸನ್ನಿಧಿಯಲ್ಲಿ ಕಳಶ ಪೂಜೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮತ್ತು ಪ್ರಸನ್ನ ಪೂಜೆ ನಂತರ ಮಧ್ಯಾಹ್ನ ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ, ನಂತರ ಸ್ವಾಮೀಜಿಯವರಿಂದ ಆಶೀರ್ವಚನ, ನಂತರ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಹೂವಿನ ಪೂಜೆ, ರಂಗ ಪೂಜೆ ನಂತರ ಶ್ರೀದೇವರ ಉತ್ಸವ ಬಲಿ, ರಾಜಾಂಗಣ ಪ್ರಸಾದ ವಿತರಣೆ ನಡೆದು ಮನೋರಂಜನಾ ಕಾರ್ಯಕ್ರಮದಂಗವಾಗಿ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ 'ಕಥೆ ಎಡ್ಡೆಂಡು' ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

0 Comments