ಬೆಂಗಳೂರು : ಚಿನ್ನ ಖರೀದಿಗೆ ಹೋಗಿದ್ದವರಿಂದ ಹಣ ಪಡೆದು ಚಿನ್ನವನ್ನೂ ಕೊಡದೇ, ಹಣವನ್ನೂ ಹಿಂತಿರುಗಿಸದೇ ವಂಚಿಸಿರುವ ಘಟನೆ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ. ಇಲ್ಲಿನ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದ್ರಚಂದ್ ಮಹಿಳೆಯೊಬ್ಬಳ ಜೊತೆ ಸೇರಿ ಹಣ ಲಪಟಾಯಿಸಿರುವುದಾಗಿ ದೂರು ದಾಖಲಾಗಿದೆ.
ಸರ್ಜಾಪುರ ಮೂಲದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡುವ ಪ್ಲಾನ್ ನಲ್ಲಿದ್ದು, ಸಂಬಂಧಿ ಸವಿತಾ ರೆಡ್ಡಿ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೆಸ್ಟೆಜ್ ಚಾರ್ಜ್ ತುಂಬಾನೇ ಕಡಿಮೆ ಇರುತ್ತೆ ಎಂದು ನಂಬಿಸಿದ್ದಾಳೆ. ಆಕೆಯ ಮಾತು ಕೇಳಿ ಪುನೀತ್ ಎರಡು ಕೋಟಿ ನಗದು ಹಣದೊಂದಿಗೆ ಎಂಪಿ ಚಿನ್ನದ ಮಳಿಗೆಗೆ ಹೋಗಿದ್ದಾರೆ. 90 ಲಕ್ಷ ರೂ.ನ ಎರಡು ಕಾಟನ್ ಬಾಕ್ಸ್ ಹಾಗೂ 20 ಲಕ್ಷ ರೂ. ಒಂದು ಬ್ಯಾಗ್ ನ್ನು ಅವರಿಂದ ಪಡೆದುಕೊಂಡು ಅರ್ಧ ಗಂಟೆ ಹೊರಗಡೆ ಇರಿ ಎಂದು ನಂಬಿಸಿ ಒಳಗಡೆ ಹೋದವರು ಮರಳಿ ಬರಲಿಲ್ಲ.
ಸಿಬ್ಬಂದಿಯನ್ನು ಕೇಳಿದರೆ ಮಾಲೀಕರ ಜೊತೆ ಮಾತನಾಡಿ, ಅಂತ ದಬಾಯಿಸಿ ಕಳಿಸಿದ್ದಾರೆ. ಮಾಲೀಕನಿಗೆ ಫೋನ್ ಮಾಡಿದಾಗ, ಉಡಾಫೆ ಉತ್ತರ ಕೊಟ್ಟು ಕೈ ತೊಳೆದುಕೊಂಡಿದ್ದಾನೆ. 2 ಕೋಟಿ ಹಾರ್ಡ್ ಕ್ಯಾಶ್ ಕೊಟ್ಟು ಕಂಗಾಲಾಗಿದ್ದ ಪುನೀತ್ ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ದಾಖಲೆ ಸಮೇತವಾಗಿ ದೂರು ನೀಡಿದ್ದಾರೆ.
ಹೆಚ್ಚಿನ ವಿಚಾರಣೆಯಲ್ಲಿ ಇಂದ್ರಚಂದ್ ಮತ್ತು ಸವಿತಾ ರೆಡ್ಡಿ ಇಬ್ಬರೂ ಸೇರಿ ಇದೇ ರೀತಿ ಹಲವರನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ. ಖರೀದಿದಾರರನ್ನು ಗುರುತಿಸಿ ಅಂಗಡಿಗೆ ಕರೆತರುವುದು ಸವಿತಾಳ ಕೆಲಸವಾಗಿತ್ತು. ಕಾನೂನು ತೊಡಕುಗಳನ್ನು ತಪ್ಪಿಸಲು ನಗದು ವಹಿವಾಟಿಗೆ ಆದ್ಯತೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪುನೀತ್ ಎಲ್ಲವು ಹಾರ್ಡ್ ಕ್ಯಾಶ್ ಕೊಟ್ಟಿರುವುದರಿಂದ ಆರೋಪಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸುಲಭವಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರ ವಿರುದ್ಧ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರು ಕೂಡ ಅವರ ಜೊತೆಯಲ್ಲಿ ಶಾಮೀಲ್ ಆಗಿದ್ದಾರೆಂದು ಹಣ ಕಳೆದುಕೊಂಡ ಪುನೀತ್ ಆರೋಪಿಸಿದ್ದಾರೆ.

0 Comments