Ticker

6/recent/ticker-posts

Ad Code

ತನ್ನನ್ನು ಮತ್ತು ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಹೇಳನ ಮಾಡಲು ವ್ಯವಸ್ಥಿತ ಸಂಚು : ಎಂ.ಎಲ್. ಅಶ್ವಿನಿ

 

ಕಾಸರಗೋಡು : ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ತನ್ನನ್ನು ಮತ್ತು ಪಕ್ಷವನ್ನು ಅವಹೇಳನ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.

ನಡೆಯದ ವಿಧಾನಸಭಾ ಕ್ಷೇತ್ರಗಳ ಅವಲೋಕನ ಸಭೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಮತ್ತು ನನ್ನ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಕಾರ್ಯವನ್ನು ಸಮನ್ವಯಗೊಳಿಸಿಲ್ಲ ಮತ್ತು ಸ್ವತಃ ಮಗನ ಹೆಸರನ್ನೇ ಸೇರಿಸಿಲ್ಲ ಎಂಬ ಆರೋಪಗಳು ತೀರಾ ಬಾಲಿಶವಾಗಿವೆ. ಮತದಾರರ ಪಟ್ಟಿ ಸೇರ್ಪಡೆ ಕಾರ್ಯಕ್ಕೆ ಜಿಲ್ಲಾ ಸಮಿತಿಯು ಎಲ್ಲಾ ಕ್ಷೇತ್ರ ಸಮಿತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ನೀಡಿದೆ. ಎರಡು ತಿಂಗಳ ಹಿಂದೆ ಮಂಜೇಶ್ವರ ಕ್ಷೇತ್ರದ ಉಸ್ತುವಾರಿ ಜವಾಬ್ದಾರಿಯಿಂದ ನಾನು ಹಿಂದೆ ಸರಿದಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ನೀಡಿದ ಮಾಧ್ಯಮಗಳೇ ಈ ಅಪಪ್ರಚಾರದ ಹಿಂದಿವೆ ಎಂದು ಅಶ್ವಿನಿ ತಿಳಿಸಿದರು.

ಒಬ್ಬ ಮಹಿಳೆ ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದದ್ದು, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆಯಾದದ್ದು ಮತ್ತು ಸ್ಥಳೀಯ ಚುನಾವಣೆಯಲ್ಲಿ 5 ಪಂಚಾಯತ್‌ಗಳಲ್ಲಿ ಆಡಳಿತ ಹಿಡಿಯುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶಿಸಿದ್ದನ್ನು ಮಾಧ್ಯಮದವರ ವೇಷದಲ್ಲಿರುವ ರಾಜಕಾರಣಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸುಳ್ಳು ಸುದ್ದಿಗಳ ಮೂಲಕ ಚಾರಿತ್ರ್ಯ ವಧೆ ಮಾಡಲು ಮತ್ತು ಪಕ್ಷದ ಘನತೆಗೆ ಧಕ್ಕೆ ತರಲು ಕೆಲವು ಮಾಧ್ಯಮ ಪ್ರತಿನಿಧಿಗಳು ಹಾಗೂ ಮಾಧ್ಯಮಗಳು ಬಹಳ ದಿನಗಳಿಂದ ಪ್ರಯತ್ನಿಸುತ್ತಿವೆ. ಇದರ ವಿರುದ್ಧ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್‌ಗೆ ದೂರು ನೀಡಲಾಗುವುದು ಮತ್ತು ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಂ.ಎಲ್. ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.

Post a Comment

0 Comments