ತಿರುವನಂತಪುರ : ಕಾಡುಹಂದಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಮಾನ್ಯತೆ ಪಡೆದ ಶೂಟರ್ಗಳು ರಾಜ್ಯದ ಯಾವುದೇ ಭಾಗದಲ್ಲಿರುವ ಉಪದ್ರವಿ ಕಾಡುಹಂದಿಗಳನ್ನು ಗುಂಡಿಕ್ಕಲು ಅವಕಾಶ ನೀಡಲಾಗಿದೆ.
ಈ ಹಿಂದೆ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೋಂದಾಯಿಸಲ್ಪಟ್ಟ ಶೂಟರ್ಗಳು ತಮ್ಮ ವ್ಯಾಪ್ತಿಯಲ್ಲೇ ಕಾಡುಹಂದಿಗಳನ್ನು ಗುಂಡಿಕ್ಕಬಹುದಾಗಿತ್ತು. ಇದೀಗ ಅವರ ಕಾರ್ಯವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ.
ರಾಜ್ಯದ ಸುಮಾರು ಶೇ.95ರಷ್ಟು ಪಂಚಾಯತ್ಗಳಲ್ಲಿ ಕಾಡುಹಂದಿಗಳ ಇರುವಿಕೆ ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಾಡುಹಂದಿಗಳಿಂದ ಕೃಷಿ ಬೆಳೆಗಳಿಗೆ ಹಾನಿ ಹಾಗೂ ಜನರಿಗೆ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳ ಪ್ರಕಾರ, ಜನವಸತಿ ಪ್ರದೇಶಗಳಲ್ಲಿ ಜೀವ ಮತ್ತು ಆಸ್ತಿಗೆ ಅಪಾಯ ಉಂಟುಮಾಡುವ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಮುಖ್ಯ ವನ್ಯಜೀವಿ ವಾರ್ಡನ್ ಅಥವಾ ಅಧಿಕಾರ ಪಡೆದ ಅಧಿಕಾರಿಗಳು ಅನುಮತಿ ನೀಡಬಹುದು.
ಆದರೆ, ಕಾನೂನುಬದ್ಧ ಕ್ರಮಗಳನ್ನು ಪಾಲಿಸದೆ ಕಾಡುಹಂದಿಯನ್ನು ಕೊಲ್ಲುವುದು ಅಥವಾ ಅದರ ಮಾಂಸವನ್ನು ಬಳಸುವುದು ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದೆಂದು ಅರಣ್ಯ ಇಲಾಖೆ ಎಚ್ಚರಿಸಿದೆ.

0 Comments