ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವಾರು ಶವ ಹೂತಿಟ್ಟಿರುವ ಪ್ರಕರಣದ ತನಿಖೆ ಬಗ್ಗೆ ರಾಜ್ಯ ಸರಕಾರ ಪ್ರಕರಣದ ಸತ್ಯಾಸತ್ಯ ತಿಳಿಯಲು ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ವಿಚಾರಣೆಯನ್ನು ನ್ಯಾಯಾಲಯದ ಮುಂದೆ ನೀಡಿದೆ. ಈ ಕುರಿತಾದ ಮಧ್ಯಂತರ ವರದಿಯನ್ನು ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಒಟ್ಟು ಬುರುಡೆ ಪ್ರಕರಣದಲ್ಲಿ ಮಂಡ್ಯ ಮೂಲದ ಚಿನ್ನಯ್ಯ ಸಹಿತ 6 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ. ಮುಂದೆ ನ್ಯಾಯಾಲಯ ನೀಡುವ ನಿರ್ದೇಶನದಂತೆ ಎಸ್ಐಟಿಯು ಆರೋಪಿಗಳ ವಿರುದ್ಧ ಕ್ರಮ ಜರಗಿಸಲಿದೆ ಎನ್ನಲಾಗಿದೆ. ಎಸ್ಐಟಿ ತನಿಖೆಯ ಕುರಿತ ವಾದವನ್ನು ಆಲಿಸಿದ ನ್ಯಾಯಾಧೀಶರು ನ. 21ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ಗುರುವಾರ ಅಪರಾಹ್ನ 3ರ ಸುಮಾರಿಗೆ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರಕುಮಾರ್ ದಯಾಮ ನೇತೃತ್ವದ ತಂಡ ಎಸ್ಐಟಿ ವಕೀಲರ ಜತೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಎಚ್.ಟಿ. ಅವರಿಗೆ ವರದಿ ಸಲ್ಲಿಕೆ ಮಾಡಿದ್ದು, ಬುರುಡೆ ಪ್ರಕರಣದ ಷಡ್ಯಂತ್ರದಲ್ಲಿ ಆರೋಪಿ ಚಿನ್ನಯ್ಯನ ಜತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಸೌಜನ್ಯಾಳ ಮಾವ ವಿಠಲ್ ಗೌಡ, ಸುಜಾತಾ ಭಟ್ ಹೀಗೆ 6 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ.
ಒಟ್ಟು ಪ್ರಕರಣಕ್ಕೆ ಸಂಬಂಧಿಸಿ 3,923 ಪುಟಗಳ ವರದಿಯನ್ನು ಸಲ್ಲಿಕೆ ಮಾಡಿದ್ದು, ಆರಂಭದಿಂದ ಅಂತ್ಯದವರೆಗೂ ನಡೆದ ತನಿಖಾ ಕ್ರಮಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ 5 ಮಂದಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವಿಷಯವೂ ಒಳಗೊಂಡಿದ್ದು, 4 ಮಂದಿಯನ್ನು ಎರಡೆರಡು ಬಾರಿ ವಿಚಾರಣೆಗೆ ಕರೆದರೂ ಬಂದಿಲ್ಲ. ಹೀಗಾಗಿ ಮುಂದೆ ಏನು ಮಾಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡುವಂತೆ ತಿಳಿಸಲಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಮಾರು 2 ತಾಸುಗಳ ಕಾಲ ಎಸ್ಐಟಿ ವಕೀಲರು ನ್ಯಾಯಾಧೀಶರ ಮುಂದೆ ವರದಿಗೆ ಸಂಬಂಧಿಸಿ ವಾದ ಮಂಡಿಸಿದ್ದು, ವರದಿಯ ಜತೆಗೆ ಮುಂದಿನ ತನಿಖೆಯ ಕುರಿತು ಮಾರ್ಗದರ್ಶನ ಕೋರಿದ್ದಾರೆ. ಮುಂದಿನ ತನಿಖೆ ಹಾಗೂ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ತನಿಖಾ ವರದಿ ಸಿದ್ಧಪಡಿಸಲು ಅವಕಾಶ ಕೋರಿ ಎಸ್ಐಟಿ ವಾದ ಮಂಡಿಸಿದೆ.

0 Comments