ಬದಿಯಡ್ಕ : ನಿಯಂತ್ರಣ ತಪ್ಪಿದ ಮಾರುತಿ ಓಮ್ನಿ ವ್ಯಾನೊಂದು ಮರಕ್ಕೆ ಡಿಕ್ಕಿ ಹೊಡೆದು 12 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದಿದ್ದು ಅದರೊಳಗಿದ್ದ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ವಿದ್ಯಾಗಿರಿ ಸಮೀಪದ ಬಾರ್ಯ ನಿವಾಸಿ ಸತ್ಯನಾರಾಯಣ ಭಟ್ (69) ಗಾಯಗೊಂಡವರಾಗಿದ್ದಾರೆ. ಇಂದು ಬೆಳಿಗ್ಗೆ 7.30ರ ಸುಮಾರಿಗೆ ಬದಿಯಡ್ಕ ಬೆಳಿಂಜ ರಸ್ತೆಯ ನವಕಾನ ಎಂಬಲ್ಲಿ ಘಟನೆ ನಡೆದಿದೆ. ತಮ್ಮ ಮನೆಯಿಂದ ಬದಿಯಡ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ಶುಗರ್ ಪರೀಕ್ಷೆ ಮಾಡಲು ಬರುತ್ತಿದ್ದಾಗ, ಓಮ್ನಿವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಆ ಮೂಲಕ ಹಾದುಹೋಗುತ್ತಿದ್ದ ಮತ್ತೊಂದು ಕಾರಿನ ಪ್ರಯಾಣಿಕರೊಬ್ಬರು ಇದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದರು. ಸ್ಥಳೀಯರ ಸಹಾಯದಿಂದ, ಜೆ.ಸಿ.ಬಿ. ಬಳಸಿ ಕಾರಿನ ಬಾಗಿಲು ಮುರಿದು ಚಾಲಕನನ್ನು ಹೊರಗೆಳೆಯಲಾಯಿತು. ಮಾಹಿತಿ ಮೇರೆಗೆ ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವೇಣುಗೋಪಾಲ್ ನೇತೃತ್ವದ ತಂಡ ಸ್ಥಳಕ್ಕೆ ತಲುಪಿ ಜೆಸಿಬಿ ಬಳಸಿ ಕಾರನ್ನು ಮೇಲಕ್ಕೆ ತೆಗೆದರು. ಗಾಯಗೊಂಡ ಸತ್ಯನಾರಾಯಣ ಭಟ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

0 Comments