ನೀರ್ಚಾಲು : ಕುಂಬಳೆ ಸಮೀಪದ ಎಡನಾಡಿನಲ್ಲಿ ಸುಮಾರು 150 ವರ್ಷಗಳ ಹಿಂದೆ ಮೊಗೇರ ಸಮುದಾಯದ ಕುಟುಂಬಸ್ಥರು ಪರಂಪರಾಗತವಾಗಿ ಆರಾಧಿಸುತ್ತಿದ್ದ ಬ್ರಹ್ಮನ ಬಂಟ ರಾಹು ಗುಳಿಗ, ಚೌಕಾರು ಗುಳಿಗ, ಕೊರತಿ, ಪಂಜುರ್ಲಿ, ಕಲ್ಲುರ್ಟಿ, ಪಿಲಿಚಾಮುಂಡಿ, ಕುಡುಮ ದೈವಗಳ ಆರಾಧನೆಯನ್ನು ಭಕ್ತಿ ನಿಷ್ಠೆಯಿಂದ ನಡೆಸುತ್ತಿದ್ದರು. ತದನಂತರ ಚೋಮಾರು ಎಂಬವರನ್ನು ನೆಲ್ಲಿಕುಂಜೆಗೂ ಕೊರತಿ ಎಂಬವರನ್ನು ಗೋಳಿಯಡ್ಕಕ್ಕೂ ವಿವಾಹ ಮಾಡಿಕೊಡಲಾಗಿತ್ತು. ಹಿರಿಯರಾದ ಕೊರತಿಯವರ ಮನೆಗೆ ಶ್ರೀದೈವಗಳ ಭಂಡಾರವನ್ನು ತರಲಾಯಿತು. ಅವರ ಮಕ್ಕಳ ನೇತೃತ್ವದಲ್ಲಿ ಈ ಕುಟುಂಬಸ್ಥರು ಬದಿಯಡ್ಕ ಸಮೀಪದ ಗೋಳಿಯಡ್ಕದಲ್ಲಿ ಕಾಲಕಾಲಕ್ಕೆ ನೇಮ, ತಂಬಿಲ ಸೇವೆಗಳು ನಡೆಸುತ್ತಿದ್ದರು. ಪ್ರಸ್ತುತ ಊರಿನಾದ್ಯಂತ ಚದುರಿ ನಿಂತ ಕುಟುಂಬವನ್ನು ಏಕಸೂತ್ರಕ್ಕೆ ತರುವುದಕ್ಕಾಗಿ ಮತ್ತು ಶ್ರೀ ದೈವಗಳಿಗೆ ವರ್ಷಾವಧಿ ಕೋಲ, ತಂಬಿಲ, ಕಲಶ ಸೇವೆಗಳನ್ನು ಸುಸೂತ್ರವಾಗಿ ಸಲ್ಲಿಸಿ ಕುಟುಂಬಕ್ಕೂ ನಾಡಿಗೂ ನೆಮ್ಮದಿ ಪ್ರಾಪ್ತವಾಗುವುದಕ್ಕೋಸ್ಕರ ತರವಾಡು ಮನೆಯ ಸಂಕಲ್ಪ ಮಾಡಿಕೊಂಡು ಕುಟುಂಬದ ಸರ್ವ ಸದಸ್ಯರ ದುಡಿಮೆಯಿಂದ ತರವಾಡು ಮನೆಯ ಎಲ್ಲಾ ಕೆಲಸ ಕಾರ್ಯಗಳು ಇದೀಗ ಪೂರ್ತಿಗೊಂಡಿದೆ. ತರವಾಡಿನ ಗೃಹಪ್ರವೇಶ ನಡೆಸುವುದರೊಂದಿಗೆ ದೈವಗಳ ಪ್ರತಿಷ್ಠೆ ಮತ್ತು ದೈವಗಳ ಕೋಲವು ಇದೇ ಬರುವ 2026 ಎಪ್ರಿಲ್ 01 ಬುಧವಾರದಿಂದ ಎಪ್ರಿಲ್ 03 ಶುಕ್ರವಾರದವರೆಗೆ ವಿವಿಧ ಧಾರ್ಮಿಕ ಕ್ರಿಯೆಗಳೊಂದಿಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಕುಟುಂಬದ ಹಿರಿಯರ ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಪ್ರತಿಷ್ಠಾ ಕಾರ್ಯದಂಗವಾಗಿ ಮಾರ್ಚ್ 26 ಗುರುವಾರ ಬೆಳಗ್ಗೆ ಗಂಟೆ 8.30ಕ್ಕೆ ಗೊನೆ ಕಡಿಯುವುದು, ಎಪ್ರಿಲ್ 01 ಬುಧವಾರ ರಾತ್ರಿ 8.00 ಗಂಟೆಗೆ ಕುತ್ತಿಪೂಜೆ, ಎಪ್ರಿಲ್ 02 ಗುರುವಾರ ಬೆಳಗ್ಗೆ 5.30 ಗಂಟೆಗೆ ಗಣಪತಿ ಹೋಮ, 6 ಗಂಟೆಗೆ ಗುರುಹಿರಿಯರಿಗೆ ಪ್ರಾರ್ಥನೆ, 6.30ರಿಂದ 7.05ರ ಮಧ್ಯೆ ತರವಾಡು ಗೃಹಪ್ರವೇಶ 8 ಗಂಟೆಗೆ ಶ್ರೀ ದೈವಗಳ ಭಂಡಾರ ಪ್ರತಿಷ್ಠೆ, 9 ಗಂಟೆಗೆ ಕುಟುಂಬದ ಹಿರಿಯರಿಗೆ ಗೌರವಾರ್ಪಣೆ, 10ಗಂಟೆಗೆ ರಾಹುಗುಳಿಗನಿಗೆ ಬಡಿಸುವುದು,11ಗಂಟೆಗೆ ಗುಳಿಗ ಮತ್ತು ಕೊರತಿ ದೈವಗಳ ಕೋಲ,ಮಧ್ಯಾಹ್ನ 1ಕ್ಕೆ ಅನ್ನದಾನ,ಸಾಯಂಕಾಲ 7ಕ್ಕೆ ಭಂಡಾರ ಇಳಿಯುವುದು,ರಾತ್ರಿ 8 ಗಂಟೆಗೆ ಅನ್ನದಾನ, ರಾತ್ರಿ 8.30ಕ್ಕೆ ಶ್ರೀ ಪಂಜುರ್ಲಿ ದೈವದ ತೊಡಂಞಲ್, ರಾತ್ರಿ 9 ಗಂಟೆಗೆ ಶ್ರೀ ಪಿಲಿಚಾಮುಡಿ ದೈವದ ತೊಡಂಞಲ್,ಎಪ್ರಿಲ್ 03 ಶುಕ್ರವಾರ ರಾತ್ರಿ 1.00 ಗಂಟೆಗೆ ಶ್ರೀ ಕಲ್ಲುರ್ಟಿ ದೈವದ ಕೋಲ, ಪೂರ್ವಾಹ್ನ 4ಕ್ಕೆ ಶ್ರೀ ಪಿಲಿಚಾಮುಡಿ ದೈವದ ಕೋಲ, ಪೂರ್ವಾಹ್ನ 5ಕ್ಕೆ ಶ್ರೀ ದೈವಗಳ ಅರಶಿನ ಹುಡಿ ಪ್ರಸಾದ ವಿತರಣೆ,ಬೆಳಗ್ಗೆ 7ಕ್ಕೆ ಶ್ರೀ ಕುಡುಮ ದೈವದ ತೊಡಂಞಲ್, ಬೆಳಗ್ಗೆ 8ಗಂಟೆಗೆ ಶ್ರೀ ಕುಡುಮ ದೈವದ ಕೋಲ,11.30 ರಿಂದ ಅರಶಿನ ಹುಡಿ ಪ್ರಸಾದ ವಿತರಣೆ, ಅಪರಾಹ್ನ 12.00 ಗಂಟೆಗೆ ಭಂಡಾರ ಏರುವುದರೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.
0 Comments