ಕುಂಬಳೆ : ದೇಶದಲ್ಲೇ ಅತ್ಯಪೂರ್ವವಾದ ಸುಮಾರು 170ರಷ್ಟು ಪಕ್ಷಿ ವೈವಿಧ್ಯಗಳಿಂದ ಸಮೃದ್ಧವಾದ ಕಿದೂರು ಪಕ್ಷಿ ಗ್ರಾಮ ಕುಂಟಂಗೇರಡ್ಕದಲ್ಲಿ ಕಿದೂರು ಜೈವ ವೈವಿಧ್ಯ ಅಧ್ಯಯನ ಕೇಂದ್ರದ ಉದ್ಘಾಟನೆಯೊಂದಿಗೆ ಕುಂಬಳೆ ಗ್ರಾಮೀಣ ಟೂರಿಸಂ ಯೋಜನೆ ನಾಡಿಗೆ ಸಮರ್ಪಣೆಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರವಾಸೋದ್ಯಮ ಮತ್ತು ಪಾರಿಸರಿಕ ಭೂಪಟದಲ್ಲಿ ಕುಂಬಳೆಯ ಕಿದೂರಿನ ಹೆಸರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವ ಯೋಜನೆ ಇದೆಂದು ಶ್ಲಾಘಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನಲ್ಲಿ ಅಳವಡಿಸಿ ಕುಂಬಳೆ ಗ್ರಾಮೀಣ ಟೂರಿಸಂ ಯೋಜನೆಗೆ ಸರಕಾರ ಎರಡು ಕೋಟಿ ಮತ್ತು 74 ಲಕ್ಷ ರೂಗಳ ಆಡಳಿತಾನುಮತಿ ನೀಡಿದೆ. ಈ ಪೈಕಿ 1.72 ಕೋಟಿ ರೂ ವಿನಿಯೋಗಿಸಿ ಕಿದೂರು ಜೈವ ವೈವಿಧ್ಯ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ. ಪಕ್ಷಿಗ್ರಾಮದ. ಜೀವ ವೖವಿಧ್ಯ ಅಧ್ಯಯನ ಸಹಿತ ಜೈವಿಕ ಅಧ್ಯಯನದ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ.
ಸಮಾರಂಭದಲ್ಲಿ ಕುಂಬಳೆ ಗ್ರಾ. ಪಂ ಆಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಜಿ. ಪಂ. ಸದಸ್ಯ ಅಜೀಝ್ ಕಳತ್ತೂರು, ಬ್ಲಾಕ್ ಪಂ. ಸದಸ್ಯೆ ನಸೀಮ ಪಿ. ಎಂ, ಗ್ರಾ. ಪಂ. ಸದಸ್ಯ ಮಂಜುನಾಥ ಆಳ್ವ, ನಿರ್ಮಿತಿ ಕೇಂದ್ರ ಜನರಲ್ ಮೇನೇಜರ್ ರಾಜಮೋಹನ್, ಕುಂಬಳೆ ಗ್ರಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎ. ಕೆ. ಆರಿಫ್, ಮಾಜಿ ಪಂ. ಅಧ್ಯಕ್ಷ ಪುಂಡರೀಕಾಕ್ಷ ಕಾಜೂರು ಮೊದಲಾದವರು ಭಾಗವಹಿಸಿದ್ದರು.
ಜಿಲ್ಲಾ ಪ್ರವಾಸೋದ್ಯಮ ನಿರ್ದೇಶಕ ನಸೀಬ್ ಎಂ. ಎ ಸ್ವಾಗತಿಸಿ, ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್ ಕುಮಾರ್ ಜೆ. ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಡಿಟಿಪಿಸಿ ವತಿಯಿಂದ ಪಕ್ಷಿ ನಿರೀಕ್ಷಕ ರಾಜು ಕಿದೂರು ಅವರನ್ನು ಗೌರವಿಸಲಾಯಿತು.

0 Comments