ಬೆಂಗಳೂರು : ಬ್ಯಾಡರಹಳ್ಳಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ ಪ್ರಕರಣದಲ್ಲಿ ಹಂತಕಿಯ ಪ್ಲ್ಯಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ಕೈಕಾಲು ಕಟ್ಟಿ ಬಟ್ಟೆ ಬಿಚ್ಚಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಿಯತಮೆ ಪ್ರೇಮಾಳಿಂದ ಕೊಲೆಯಾದ ಕಿರಣ್, ಈಕೆಯನ್ನು ಅವಾಯ್ಡ್ ಮಾಡಿ ಮಾಜಿ ಲವರ್ ಜೊತೆಗೆ ಸಂಪರ್ಕದಲ್ಲಿದ್ದ, ಕೊಲೆಗೆ ಇದೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
4 ವರ್ಷಗಳಿಂದ ಪರಿಚಿತಳಾಗಿದ್ದ ಪ್ರೇಮಾ ಜೊತೆಗೆ ಕಿರಣ್ಗೆ 2 ವರ್ಷದಿಂದ ಪ್ರೇಮವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಪ್ರೇಮಾಳನ್ನು ಅವಾಯ್ಡ್ ಮಾಡಲು ಶುರು ಮಾಡಿದ್ದ ಕಿರಣ್ ಮಾಜಿ ಪ್ರಿಯತಮೆಯೊಂದಿಗೆ ಸಂಪರ್ಕದಲ್ಲಿದ್ದು, ಇತ್ತೀಚೆಗೆ ಆಕೆಯ ಹುಟ್ಟುಹಬ್ಬ ಸೆಲಬ್ರೇಷನ್ ಮಾಡಿ ಫೋಟೋಸ್ ಕೂಡ ತೆಗೆದುಕೊಂಡಿದ್ದ. ಇದನ್ನು ನೋಡಿದ ಪ್ರೇಮಾ, ಕಿರಣ್ ಜೊತೆಗೆ ಗಲಾಟೆ ಮಾಡಿದ್ದಳು. ಆ ಬಳಿಕ ಕಿರಣ್, ಪ್ರೇಮಾಳ ನಂಬರನ್ನು ಬ್ಲಾಕ್ ಮಾಡಿದ್ದ.
ಅವಾಯ್ಡ್ ಮಾಡುತ್ತಿದ್ದ ಕಾರಣದಿಂದಾಗಿ ಕಿರಣ್ನ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಪ್ರೇಮ ಪ್ಲ್ಯಾನ್ ಮಾಡಿದ್ದಳು. ಇದಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಳು. ಕ್ಯಾನ್ ಹಿಡಿದುಕೊಂಡು ಹೋಗಿ ಬ್ಯಾಡರಹಳ್ಳಿ ಅಂಗಡಿಯೊಂದರಲ್ಲಿ 4 ಲೀಟರ್ ಸೀಮೆ ಎಣ್ಣೆ ಖರೀದಿ ಮಾಡಿದ್ದಳು. ಅಲ್ಲದೇ ಎರಡು ಲೀಟರ್ ಬಾಟಲ್ನಲ್ಲಿ 200 ರೂ.ಗೆ ಪೆಟ್ರೋಲ್ ಸಹ ಖರೀದಿಸಿದ್ದಳು. ಬಳಿಕ ಬೇರೊಂದು ನಂಬರ್ನಿಂದ ಕಿರಣ್ಗೆ ಕರೆ ಮಾಡಿದ್ದ ಪ್ರೇಮಾ ನೀನು ಹೇಳಿದ್ದ ದಿನವೇ ಮದುವೆ ಆಗೋಣ ಅಂತ ಹೇಳಿದ್ದಳು. ಬಾಯ್ಫ್ರೆಂಡ್ ಬರುವ ಮೊದಲೇ ಬಕೆಟ್ನಲ್ಲಿ ಎರಡೂ ಮಿಕ್ಸ್ ಮಾಡಿ ಇಟ್ಟಿದ್ದಳು. ಕಿರಣ್ ಬಂದಾಗ ವೆಸ್ಟರ್ನ್ ಸ್ಟೈಲ್ನಲ್ಲಿ ಪ್ರಪೋಸ್ ಮಾಡುವುದಾಗಿ ಹೇಳಿ, ಕೈ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಪೆಟ್ರೋಲ್ ಎರಚಿ, ಬೆಂಕಿ ಗೀರಿ ಕೊಲೆ ಮಾಡಿದ್ದಾಳೆ. ನನ್ನ ಅವಾಯ್ಡ್ ಮಾಡಿದವನು ಇರಬಾರದು. ಅವನನ್ನು ಸಾಯಿಸಿ ಬಳಿಕ ತಾನೂ ಸಾಯಬೇಕು ಅಂದುಕೊಂಡಿದ್ದಳು. ಆದರೆ ಬೆಂಕಿ ಶಾಖದಿಂದ ಹೊರಗೆ ಬಂದಿದ್ದಳು ಎನ್ನಲಾಗಿದೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

0 Comments