ಶಿವಮೊಗ್ಗ : ಧರ್ಮಸ್ಥಳ ಬುರುಡೆ ಪ್ರಕರಣದ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಮಂಜೂರಾದರೂ ಇನ್ನು ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ 9 ದಿನ ಕಳೆದರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲೇ ಚಿನ್ನಯ್ಯ ದಿನ ಕಳೆಯುತ್ತಿದ್ದಾನೆ. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನನ್ನು ಬಳಸಿಕೊಂಡು ಬುರುಡೆ ಗ್ಯಾಂಗ್ ದೂರು ನೀಡಿತ್ತು. ಆದರೆ ಯಾವಾಗ ಬುರುಡೆ ಗ್ಯಾಂಗ್ ವಿರುದ್ಧವೇ ಚಿನ್ನಯ್ಯ ತಿರುಗಿ ಬಿದ್ದನೋ ಅಲ್ಲಿಂದ ಗ್ಯಾಂಗ್ ಸದಸ್ಯರು ಚಿನ್ನಯ್ಯನ ವಿರುದ್ಧವೇ ಮಾತನಾಡುತ್ತಿದ್ದಾರೆ.
ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ 1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತುಗಳನ್ನು ವಿಧಿಸಿ ನ.25ರಂದು ಜಾಮೀನು ಮಂಜೂರು ಮಾಡಿತ್ತು.

0 Comments