ಪೆರ್ಲ : ಮಹಿಳೆಯೋರ್ವೆಗೆ ನಿರಂತರ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಚಿತ್ರೀಕರಣ ನಡೆಸಿದ್ದ ಶಾಲಾ ಅಧ್ಯಾಪಕ , ಸಿಪಿಎಂ ನೇತಾರ, ಎಣ್ಮಕಜೆ ಪಂಚಾಯತು ಸದಸ್ಯ ಸುಧಾಕರ ಮಾಸ್ತರ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯುಡಿಎಫ್ ಎಣ್ಮಕಜೆ ಪಂಚಾಯತು ಸಮಿತಿ ವತಿಯಿಂದ ಎಣ್ಮಕಜೆ ಪಂಚಾಯತು ಕಚೇರಿಗೆ ಮಾರ್ಚ್ ನಡೆಯಿತು.
ಎಣ್ಮಕಜೆ ಯುಡಿಎಫ್ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಿಪಿಎಂ ನ ಮಾರ್ಯಾದೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಳಂಕಿತ ನೇತಾರನ ರಾಜೀನಾಮೆ ಅನಿವಾರ್ಯ ಎಂದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿಗೆ ಕಳಂಕ ತರುವ ಕೃತ್ಯಗಳನ್ನು ಎಸಗಿದ ಸುಧಾಕರ ಮಾಸ್ತರ್ ಅವರು ನೈತಿಕ ಹೊಣೆ ಹೊತ್ತುಕೊಂಡು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಎಣ್ಮಕಜೆ ಪಂ.ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್, ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಜೆ.ಎಸ್, ಕಾಂಗ್ರೆಸ್ ಮಂಡಲಾಧ್ಯಕ್ಷ ಬಿ.ಎಸ್. ಗಾಂಭೀರ್ ಮಾತನಾಡಿದರು. ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಬಿ, ರಮ್ಲ ಇಬ್ರಾಹಿಂ, ಪಂ.ಸದಸ್ಯ ಶರತ್ಚಂದ್ರ ಶೆಟ್ಟಿ ಶೇಣಿ, ಆಯಿಷಾ ಎ.ಎ, ಮಿಸ್ರಿಯಾ, ಮುಸ್ಲಿಂಲೀಗ್ ಅಧ್ಯಕ್ಷ ಎ.ಕೆ.ಶೇರಿಫ್, ಬಶೀರ್ ಪೆರ್ಲ, ಅಬೂಬಕ್ಕರ್ ಪೆರ್ದನೆ, ಅರಿಸ್ ಎಂ.ಎಚ್ ಶೇಣಿ, ಅಬ್ದುಲ್ಲ ಕುರೆಡ್ಕ, ಉಮ್ಮರ್ ಕಂಗಿನಮೂಲೆ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.
ಹಮೀದಾಲಿ ಕಂದಲ್ ಸ್ವಾಗತಿಸಿ, ಎಣ್ಮಕಜೆ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪಿಎಂ ಪಳ್ಳಂ ವಂದಿಸಿದರು. ಮಂಡಲ ಕಾಂಗ್ರೆಸ್ ಕಚೇರಿ ಪರಿಸರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಂಚಾಯತ್ ಕಚೇರಿ ಮುಂಭಾಗ ತಲುಪಿದಾಗ ಪೋಲಿಸರು ತಡೆದರು.

0 Comments